ಮಂಗಳೂರು, ಜೂನ್ 23: ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿರುವ ಹಲವು ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳನ್ನು ಮುಚ್ಚಿಹಾಕುವುದಕ್ಕಾಗಿ ಮೃತದೇಹಗಳನ್ನು ಹೂತು ಹಾಕಿದ್ದೆ ಎಂದು ಹೇಳಿಕೊಂಡಿರುವ ವ್ಯಕ್ತಿಯೊಬ್ಬ ಪೊಲೀಸರಿಗೆ ಶರಣಾಗಲು ಮುಂದಾಗಿದ್ದಾನೆ. ಈ ಸಂಬಂಧ ವಕೀಲರೊಬ್ಬರ ಬಳಿ ವಿಚಾರ ವಿನಿಮಯ ಮಾಡಿಕೊಂಡಿರುವ ವ್ಯಕ್ತಿ, ಪೊಲೀಸರ ಸಮ್ಮುಖದಲ್ಲಿ ಶವಗಳನ್ನು ಹೊರತೆಗೆಯಲು ನಿರ್ಧರಿಸಿರುವುದಾಗಿ ಹೇಳಿಕೊಂಡಿದ್ದಾನೆ.
ಆರೋಪಿ ಶರಣಾಗತಿಗೆ ಒಪ್ಪಿಕೊಂಡಿರುವ ಬಗ್ಗೆ ವಕೀಲರು ಬಿಡುಗಡೆ ಮಾಡಿದ ಮಾಹಿತಿ ಪತ್ರವೊಂದು ವೈರಲ್ ಆಗಿದ್ದು, ಈ ವಿಚಾರವಾಗಿ ಅಡ್ವೋಕೇಟ್ ಅನ್ನು ಸಂಪರ್ಕಿಸಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಮಾಹಿತಿ ಪಡೆದಿದ್ದಾರೆ.
ವೈರಲ್ ಆಗಿರುವ ಪತ್ರದಲ್ಲೇನಿದೆ?
‘‘ಗ್ರಾಮವೊಂದರಲ್ಲಿ ನಡೆದಿರುವ ಹಲವಾರು ಹತ್ಯೆ, ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರ ಮತ್ತು ಕೊಲೆಗಳನ್ನು ಮುಚ್ಚಿಹಾಕುವ ಸಲುವಾಗಿ, ಮೃತ ದೇಹಗಳನ್ನು ಹೂತು ಹಾಕಿದ್ದ ವ್ಯಕ್ತಿಯೊಬ್ಬ ತನ್ನ ಪಾಪಪ್ರಜ್ಞೆಯನ್ನು ಪರಿಹರಿಸಿಕೊಳ್ಳಲು ಪೊಲೀಸ್ ಠಾಣೆಗೆ ಕೂಡಲೇ ಹಾಜರಾಗಿ ಶರಣಾಗುವ ನಿರ್ಧಾರ ಮಾಡಿರುತ್ತಾನೆ. ಮತ್ತು, ತಾನು ಹೂತು ಹಾಕಿರುವ ಮೃತದೇಹಗಳನ್ನು ಪೋಲೀಸರ ಸಮ್ಮುಖದಲ್ಲಿ ಹೊರತೆಗೆಯುವ ನಿರ್ಧಾರ ಮಾಡಿರುತ್ತಾನೆ. ಇತ್ತೀಚೆಗೆ ಹೊರ ತೆಗೆದ ಕಳೇಬರವೊಂದುನ್ನು ಪೋಲೀಸರಿಗೆ ಒಪ್ಪಿಸುವುದಾಗಿ ಹೇಳಿದ್ದಾನೆ. ಇದು ಸಾರ್ವಜನಿಕ ಮಾಹಿತಿಗಾಗಿ’’ ಎಂದು ನಾಗರಾಜ್ ಪಿಎನ್, ಓಜಸ್ವಿ ಗೌಡ ಹಾಗೂ ಸಚಿನ್ ಎಸ್ ದೇಶಪಾಂಡೆ ಎಂಬವರ ಸಹಿಯುಳ್ಳ ಪತ್ರ ವೈರಲ್ ಆಗಿದೆ.
Laxmi News 24×7