ಬೆಂಗಳೂರು, ಜೂನ್ 04: ಟಾಟಾ ಐಪಿಎಲ್ ಚಾಂಪಿಯನ್ಸ್ ಟ್ರೋಫಿ ಗೆದ್ದು, ಆರ್ಸಿಬಿ (RCB) ತಂಡ ಬೆಂಗಳೂರಿಗೆ ಹಿಂದಿರುಗಿದೆ. ಈ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತದ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ವಿಧಾನಸೌಧದ ಮುಂದೆ ನಡೆದ ಕಾರ್ಯಕ್ರಮ ಯಶಸ್ವಿಯಾಗಿದೆ. ಆದರೆ, ಕೆಎಸ್ಸಿಎ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy stadium) ಆಯೋಜಿಸಿದ ಕಾರ್ಯಕ್ರಮದಿಂದ ಕಾಲ್ತುಳಿತ ಸಂಭವಿಸಿ ಜನ ಮೃತಪಟ್ಟಿದ್ದಾರೆ ಎಂದು ಹೇಳುವ ಮೂಲಕ ಈ ಘಟನೆಯಲ್ಲಿ ಸರ್ಕಾರದ ತಪ್ಪಿಲ್ಲ ಎಂದು ಹೇಳಿದರು. ಆದರೆ, ಸಿಎಂ ಸಿದ್ದರಾಮಯ್ಯ ಅವರು ಕೆಎಸ್ಸಿಎಯನ್ನು ದೂರಿಲ್ಲ. ಇಷ್ಟು ಜನ ಏಕಾಏಕಿ ಸೇರಿದಾಗ ಎಲ್ಲ ಕಡೆ ಕಾಲ್ತುಳಿತ (Stampede) ಸಂಭವಿಸುತ್ತದೆ ಎಂದು ಅವರು ಹೇಳಿದ್ದಾರೆ.
ಕಾವೇರಿ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಲ್ತುಳಿತದಲ್ಲಿ 11 ಜನರು ಮೃತಪಟ್ಟಿದ್ದಾರೆ. 47 ಜನ ಗಾಯಗೊಂಡಿದ್ದಾರೆ. ಮೃತರ ಕುಟುಂಬಕ್ಕೆ 10 ಲಕ್ಷ ಪರಿಹಾರ ನೀಡಲಾಗುವುದು. ಮತ್ತು ಕಾಲ್ತುಳಿತದಲ್ಲಿ ಗಾಯಗೊಂಡವರಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುವುದು. ಚಿಕಿತ್ಸಾ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸುತ್ತದೆ. ಮ್ಯಾಜಿಸ್ಟೀರಿಯಲ್ ಮೂಲಕ ಪ್ರಕರಣದ ತನಿಖೆ ಮಾಡಿಸುತ್ತೇವೆ. 15 ದಿನದ ಒಳಗೆ ವರದಿ ಸಲ್ಲಿಸುವಂತೆ ಸೂಚನೆ ನೀಡುತ್ತೇನೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದರು.
ಕಾಲ್ತುಳಿತ ದುರಂತ ಸಂಭವಿಸಬಾರದಿತ್ತು, ಆದರೆ ಆಗೋಗಿದೆ ದುರಂತಕ್ಕೆ ನಾವು ಮರುಗುತ್ತೇವೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಾವು ಕಾರ್ಯಕ್ರಮ ಆಯೋಜಿಸಿರಲಿಲ್ಲ. ನಾವು ಪೊಲೀಸ್ ಭದ್ರತೆ ಒದಗಿಸುವುದು ಸರ್ಕಾರ ಕೆಲಸವಾಗಿರುತ್ತೆ. ಕ್ರೀಡಾಂಗಣದಲ್ಲಿ ಎಷ್ಟು ಆಸನಗಳಿರುತ್ತವೋ, , ಅಷ್ಟೇ ಟಿಕೆಟ್ ಕೊಡುತ್ತಾರೆ. ಕಾಲ್ತುಳಿತ ದುರಂತದ ಬಗ್ಗೆ ಮಾಜಿಸ್ಟೀರಿಯಲ್ ತನಿಖೆ ಮಾಡಿಸುತ್ತೇವೆ. ಪೊಲೀಸರ ತಪ್ಪಾ ಅಥವಾ ಕೆಎಸ್ಸಿಎ ಅವರ ತಪ್ಪಾ ಗೊತ್ತಾಗುತ್ತೆ. ವರದಿ ಬಂದ ನಂತರ ಮುಂದಿನ ನಿರ್ಧಾರ ತಿಳಿಸುತ್ತೇನೆ ಎಂದು ಹೇಳಿದರು
Laxmi News 24×7