Breaking News

ಅಕ್ರಮವಾಗಿ ಆಸ್ತಿ ಮಾರಾಟ ಮಾಡುವವರಿಗೆ ಬ್ರೇಕ್!: ದಸ್ತಾವೇಜು ನೋಂದಣಿಗೆ ಆಧಾರ್ ಕಡ್ಡಾಯ, ದೃಢೀಕರಣ ಮಾಡುವ ವಿವರ ಹೀಗಿದೆ

Spread the love

ಬೆಂಗಳೂರು : ಜಮೀನು ಮಾಲೀಕತ್ವ ಸುರಕ್ಷತೆ ಹಾಗೂ ವಂಚನೆ ತಡೆಯಲು ಆಸ್ತಿ ನೋಂದಣಿಗೆ ಸರ್ಕಾರ ಆಧಾರ್ ಕಡ್ಡಾಯಗೊಳಿಸಿದೆ. ರಾಜ್ಯದ ಉಪ ನೋಂದಣಾಧಿಕಾರಿಗಳ ಕಚೇರಿಗಳಲ್ಲಿ ದಸ್ತಾವೇಜು ನೋಂದಣಿಗೆ ಆಧಾ‌ರ್ ದೃಢೀಕರಣ ವ್ಯವಸ್ಥೆಯನ್ನು ಜಾರಿಗೊಳಿಸಿದೆ.

ಖಚಿತಪಡಿಸಿಕೊಳ್ಳಿ: ರಿಜಿಸ್ಟ್ರೇಷನ್‌ಗೆ ಹೋಗುವ ಮುನ್ನ ಆಧಾರ್​ಗೆ ಅಧಿಕೃತ ಮೊಬೈಲ್ ನಂಬರ್ ಜೋಡಣೆ, ಬಯೋಮೆಟ್ರಿಕ್ ಅಪ್‌ಡೇಟ್, ಹೆಸರು ಹೊಂದಾಣಿಕೆ ಆಗಿದೆಯಾ? ಎಂಬುದನ್ನು ಖಚಿತ ಪಡಿಸಿಕೊಳ್ಳುವುದು ಸೂಕ್ತ. ಇಲ್ಲದಿದ್ದರೆ, ಅಪ್‌ಡೇಟ್ ಮಾಡಿಕೊಂಡು ಸಬ್‌ರಿಜಿಸ್ಟ್ರಾ‌ರ್ ಕಚೇರಿಗೆ ತೆರಳಿ ರಿಜಿಸ್ಟ್ರೇಷನ್ ಪ್ರಕ್ರಿಯೆ ಮುಗಿಸಿಕೊಳ್ಳಿ. ಇಲ್ಲವಾದಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿ ರಿಜಿಸ್ಟ್ರೇಷನ್ ಮಾಡಿಕೊಳ್ಳಲು ಸಾಧ್ಯವಾಗದು.

ರಾಜ್ಯದಲ್ಲಿ 256 ಸಬ್‌ರಿಜಿಸ್ಟ್ರಾ‌ರ್ ಕಚೇರಿಗಳು ಸೇವೆ ಸಲ್ಲಿಸುತ್ತಿದ್ದು, ಪ್ರತಿ ಕಚೇರಿಯಲ್ಲಿ ವರ್ಷಕ್ಕೆ ಅಂದಾಜು 20 ರಿಂದ 24 ಲಕ್ಷ ದಸ್ತಾವೇಜುಗಳು ನೋಂದಣಿ ಆಗಲಿದೆ.

ಇನ್ನು ಸಬ್‌ರಿಜಿಸ್ಟ್ರಾ‌ರ್ ಕಚೇರಿ ಸಾಫ್ಟ್‌ವೇರ್ ಅನ್ನು ಕಾವೇರಿ 2.0 ತಂತ್ರಾಂಶಕ್ಕೆ ಅಪ್‌ಗ್ರೇಡ್ ಮಾಡಿ ಅಕ್ರಮ ತಡೆಗೆ ಸುರಕ್ಷಿತ ಕ್ರಮಗಳು, ಆದಾಯ ಸೋರಿಕೆಗೆ ಸಾಕಷ್ಟು ಬದಲಾವಣೆ ತರಲಾಗಿದೆ. ಕೆಲ ವಂಚಕರು, ಖಾಲಿ ಇರುವ ನಿವೇಶನ, ಜಮೀನಿಗೆ ಅಥವಾ ಸರ್ಕಾರಿ ಜಾಗಕ್ಕೆ ನಕಲಿ ದಾಖಲೆ ಸೃಷ್ಟಿಸಿ ಬೇರೆಯವರಿಗೆ ಮಾರಾಟ ಮಾಡುವುದು ಅಥವಾ ಭೂ ಕಬಳಿಕೆ ಮಾಡುತ್ತಿದ್ದಾರೆ. ಇದರಿಂದ ಭೂಮಿ ಖರೀದಿಸಿದವರು ಮತ್ತು ಅಸಲಿ ಭೂಮಾಲೀಕರಿಗೂ ಅನ್ಯಾಯವಾಗುತ್ತಿದೆ.

ದಸ್ತಾವೇಜುಗಳಿಗೆ ಬರುವ ಪಕ್ಷಗಾರರು ಹಾಜರುಪಡಿಸುವ ಆಸ್ತಿಯ ದಾಖಲೆ ಪತ್ರಗಳ ಅಸಲಿತನ ಪರೀಕ್ಷೆ ಮಾಡುವ ಅಥವಾ ನೋಂದಣಿಗೆ ನಿರಾಕರಿಸುವ ಅಧಿಕಾರ ಸಬ್‌ರಿಜಿಸ್ಟ್ರಾ‌ರ್​ಗೆ ಇಲ್ಲ. ವಂಚಕರು ಇದನ್ನೇ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ನಕಲಿ ದಾಖಲೆ ಸಲ್ಲಿಸಿ ಅಕ್ರಮವಾಗಿ ಮಾರಾಟ ಮಾಡುವ ವಂಚಕರಿಗೆ ಬ್ರೇಕ್ ಹಾಕುವ ಉದ್ದೇಶದಿಂದ ಆಧಾರ್ ದೃಢೀಕರಣ ವ್ಯವಸ್ಥೆ ಜಾರಿಗೆ ತರಲಾಗಿದೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ

ದಸ್ತಾವೇಜಿನ ನೋಂದಣಿ ವೇಳೆ ಆಧಾರ್ ದೃಢೀಕರಣ ಹೇಗೆ?: ದಸ್ತಾವೇಜಿನ ನೋಂದಣಿ ವೇಳೆ ಎರಡು ಹಂತಗಳಲ್ಲಿ ಆಧಾ‌ರ್ ದೃಢೀಕರಣ ಮಾಡಲಾಗುತ್ತದೆ. ಮೊದಲನೇ ಹಂತದಲ್ಲಿ ಸಾರ್ವಜನಿಕರು ಕಾವೇರಿ 2.0 ತಂತ್ರಾಂಶದಲ್ಲಿ ಅರ್ಜಿ ಸಲ್ಲಿಸುವಾಗ ಆಧಾರ್‌ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್‌ಗೆ ಒಟಿಪಿ ಬರಲಿದೆ. ಅದನ್ನು ನಮೂದು ಮಾಡಿದಾಗ ದೃಢೀಕರಣವಾಗಿ ಮುಂದಿನ ಹಂತಕ್ಕೆ ಹೋಗಲಿದೆ. ಬಳಿಕ ಉಪ ನೋಂದಣಿ ಕಚೇರಿಯಲ್ಲಿ ಹೆಬ್ಬೆಟ್ಟಿನ ಗುರುತು ನೀಡುವ ಸಂದರ್ಭದಲ್ಲಿ ಬಯೋಮೆಟ್ರಿಕ್ ಆಧಾರಿತ ದೃಢೀಕರಣ ಮಾಡಲಾಗುತ್ತದೆ. ಒಂದು ವೇಳೆ ಆಧಾರ್​ನಲ್ಲಿ ಮೊಬೈಲ್ ನಂಬರ್ ಬೇರೆ ಇದ್ದರೆ ಅರ್ಜಿ ಸಲ್ಲಿಸುವ ಹಂತದಲ್ಲಿಯೇ ತೊಂದರೆ ಉಂಟಾಗಲಿದೆ. ಆದ ಕಾರಣ ಆಧಾರ್‌ನಲ್ಲಿ ಮೊಬೈಲ್ ನಂಬರ್ ಬದಲಾಗಿದ್ದರೆ ಸರಿಪಡಿಸಿಕೊಳ್ಳುವುದು ಸೂಕ್ತ.

ರಾಜ್ಯದಲ್ಲಿ ಈಗಾಗಲೇ ಪಹಣಿಗೆ ವಾರಸುದಾರರ ಆಧಾರ್ ಲಿಂಕ್ ಮಾಡಲಾಗುತ್ತಿದೆ. ಅದೇ ರೀತಿ ಎಲ್ಲ ಆಸ್ತಿಗಳಿಗೆ ಆಧಾರ್ ಲಿಂಕ್ ಮಾಡಬೇಕು. ದಸ್ತಾವೇಜು ನೋಂದಣಿಗೆ ಸಬ್‌ರಿಜಿಸ್ಟ್ರಾ‌ರ್ ಕಚೇರಿಗೆ ಬಂದಾಗ ಆಧಾ‌ರ್ ಅಥವಾ ಆಸ್ತಿ ವಿಶೇಷ ಸಂಖ್ಯೆಯನ್ನು ಕಾವೇರಿ 2.0ರಲ್ಲಿ ನಮೂದು ಮಾಡಿದ ವಾರಸುದಾರರ ಸ್ವವಿವರ ಓಪನ್ ಆಗಬೇಕು.

ಬಳಿಕ ಆಧಾರ್ ಒಟಿಪಿ ಪಡೆದು ದೃಢೀಕರಿಸಿ ಆಸ್ತಿ ರಿಜಿಸ್ಟ್ರೇಷನ್‌ ಮಾಡಿದರೆ ಸಂಪೂರ್ಣ ಅಕ್ರಮ ತಡೆಗಟ್ಟಲು ಸಾಧ್ಯವಾಗುತ್ತದೆ ಎಂಬುದು ಉಪನೋಂದಣಾಧಿಕಾರಿಗಳ ಅಭಿಪ್ರಾಯ.

15 ವರ್ಷಗಳಿಗಿಂತ ಕಡಿಮೆ ವಯಸ್ಸಿನಲ್ಲಿ ಆಧಾರ್ ಮಾಡಿಸಿದ್ದರೆ ಬಯೋಮೆಟ್ರಿಕ್‌ ಅಪ್‌ಡೇಟ್ ಮಾಡಿಸಿ ಮತ್ತು ಸ್ಥಿರಾಸ್ತಿಯಲ್ಲಿ ಇರುವಂತೆ ಹೆಸರನ್ನು ಆಧಾರ್‌ನಲ್ಲೂ ಸರಿಪಡಿಸಿಕೊಳ್ಳುವಂತೆ ಸೂಚಿಸಲಾಗಿದೆ.

ದಸ್ತಾವೇಜು ನೋಂದಣಿ ವೇಳೆ ಪಾನ್ ಕಾರ್ಡ್, ಪಾಸ್‌ ಪೋರ್ಟ್ ಬಳಸಲು ಅವಕಾಶ : ದಸ್ತಾವೇಜು ನೋಂದಣಿ ವೇಳೆ ಆಧಾರ್ ಕಾರ್ಡ್ ಕೆವೈಸಿ ಆಗದೇ ಇದ್ದರೆ ಪಾನ್ ಕಾರ್ಡ್ ಮತ್ತು ಪಾಸ್‌ ಪೋರ್ಟ್ ಬಳಸಲು ಅವಕಾಶವಿದೆ. ಆದರೆ, ಪಾಸ್‌ಪೋರ್ಟ್ ಎಲ್ಲರ ಬಳಿ ಇರುವುದಿಲ್ಲ. ಆದರಿಂದ ಆಧಾರ್ ಅಪ್‌ಡೇಟ್ ಮಾಡಿಕೊಳ್ಳುವುದು ಉತ್ತಮ ಎಂದು ಅಧಿಕಾರಿಗಳು ಸಲಹೆ ನೀಡಿದ್ದಾರೆ.


Spread the love

About Laxminews 24x7

Check Also

ಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ

Spread the loveಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ ಬೆಳಗಾವಿ: ಎನ್.ಕೆ. ಎಜುಕೇಶನ್ ಸೊಸೈಟಿಯ ಅಧೀನದಲ್ಲಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ