ಮಂಗಳೂರು(ದಕ್ಷಿಣ ಕನ್ನಡ): 48 ವರ್ಷದ ಹಿಂದೆ ನಿಂತು ಹೋಗಿದ್ದ ಧರ್ಮ ಭೇಟಿ, ದೈವ ದೇವರ ಇಚ್ಚೆಯಂತೆ ಮಂಗಳೂರಿನಲ್ಲಿ ಭಾನುವಾರ ನಡೆಯಿತು. 48 ವರ್ಷಗಳ ಹಿಂದೆ ಅರಸು ಧರ್ಮ ಜಾರಂದಾಯ ದೈವ ಮತ್ತು ಕದ್ರಿ ಮಂಜುನಾಥ ದೇವರ ಭೇಟಿ ಧಾರ್ಮಿಕ ಕಾರ್ಯಕ್ರಮದಲ್ಲಿ ನಡೆಯುತ್ತಿತ್ತು. ನಿಂತು ಹೋಗಿದ್ದ ಈ ಧಾರ್ಮಿಕ ಪ್ರಕ್ರಿಯೆ 48 ವರ್ಷದ ಬಳಿಕ ನಡೆದಿದೆ. ಈ ಮೂಲಕ ಕದ್ರಿ ಮಂಜುನಾಥನ ಕ್ಷೇತ್ರ ಗತವೈಭವದ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದೆ.
ಬಾಳೆಬೈಲು ಶ್ರೀ ಅರಸು ಧರ್ಮ ಜಾರಂದಾಯ ದೈವ, ನೇಮದಲ್ಲಿ ಮಂಜುನಾಥ ದೇವರ ಜೊತೆಗಿನ ಮಾಯದ ಭೇಟಿ ಸಾಕು, ಜೋಗದ ಭೇಟಿ ಬೇಕು ಎಂದು ಪ್ರಸ್ತಾಪವನ್ನಿಟ್ಟಿತ್ತು. ಪ್ರತಿ ವರ್ಷ ನೇಮೋತ್ಸವ ಆದಾಗ ದೈವ ಈ ಪ್ರಸ್ತಾಪವನ್ನಿಟ್ಟುಕೊಂಡೇ ಬರುತ್ತಿತ್ತು. ಗ್ರಾಮದೊಳಗಿನ ಸಮಸ್ಯೆಗಳಿಗೆ ಈ ಭೇಟಿ ಪರಿಹಾರ ಎಂಬ ಸೂಚನೆಯನ್ನೂ ದೈವವು ನೀಡಿತ್ತು.
ಈ ಬಗ್ಗೆ ಪ್ರಶ್ನಾ ಚಿಂತನೆಯನ್ನು ಮಾಡಿದಾಗ ದೈವ ದೇವರ ಜೋಗದ ಭೇಟಿಗೆ ಇದು ಸಕಾಲ. ಈ ಭೇಟಿಯಿಂದ ಗ್ರಾಮ, ನಾಡಿಗೆ ಸುಭಿಕ್ಷೆಯಾಗಲಿದೆ ಅಂತಾ ಕಂಡು ಬಂದಿದೆ.ದೈವದ ಮಾತಿನಂತೆಯೇ 48 ವರ್ಷದ ಬಳಿಕ ಕದ್ರಿ ದೇವರು ಮತ್ತು ಜಾರಂದಾಯ ದೈವದ ಅಪೂರ್ವ ಭೇಟಿಯಾಗಿದೆ.
ಭಾನುವಾರ ಸಂಜೆಯ ವೇಳೆಗೆ ಕೆಪಿಟಿ ಉದಯನಗರದಲ್ಲಿರುವ ಬಾಳೆಬೈಲು ಶ್ರೀ ಅರಸು ಜಾರಂದಾಯ ಬಂಟ ಮತ್ತು ವಾರಾಹಿ ದೈವಸ್ಥಾನ, ಕಲ್ಲಪಟ್ಟೆ ಭಂಡಾರ ದೈವಸ್ಥಾನದಿಂದ ಶ್ರೀ ಅರಸು ಜಾರಂದಾಯ, ಬಂಟ ದೈವಗಳ ಭಂಡಾರ ಸಕಲ ಬಿರುದಾವಳಿಯೊಂದಿಗೆ ಹೊರಟು ರಾತ್ರಿ ಎಂಟು ಗಂಟೆಯ ವೇಳೆಗೆ ಕದ್ರಿ ಕ್ಷೇತ್ರವನ್ನು ತಲುಪಿದೆ. ಕದ್ರಿ ದೇವಸ್ಥಾನದ ಗೋಪುರ ಬಳಿ ದೈವ ಜಾರಂದಾಯವನ್ನು ದೇವಸ್ಥಾನದ ಸಮಿತಿ ಸ್ವಾಗತಿಸಿದೆ.
Laxmi News 24×7