ಬೆಂಗಳೂರು: ನಾನು ಹೈಕಮಾಂಡ್ ಬಳಿ ಯಾವುದೇ ಕ್ಷಮಾಪಣೆ ಕೇಳಿಲ್ಲ, ಪತ್ರವನೂ ಬರೆದಿಲ್ಲ ಎಂದು ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸ್ಪಷ್ಟಪಡಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಯತ್ನಾಳ ಕ್ಷಮಾಪಣೆ ಕೇಳಿ ಹೈ ಕಮಾಂಡ್ಗೆ ಪತ್ರ ಬರೆದಿದ್ದಾರೆ, ನಾನು ಪಕ್ಷದ ಶಿಸ್ತು ಉಲ್ಲಂಘಿಸುವುದಿಲ್ಲ. ಪಕ್ಷದ ಇತಿ ಮಿತಿಯೊಳಗೆ ಕೆಲಸ ಮಾಡುತ್ತೇನೆ ಎಂದು ಪತ್ರ ಬರೆದಿದ್ದೇನೆ ಎಂದು ಸುದ್ದಿಯಾಗುತ್ತಿದೆ. ಎಲ್ಲಿ ಇದೆ ದಾಖಲೆ?. ನಾನು ಯಾರ ಬಳಿಯೂ ಹೋಗಿಲ್ಲ. ಕ್ಷಮಾಪಣೆಯನ್ನೂ ಕೇಳಿಲ್ಲ. ನಾನು ಎಲ್ಲಿಯೂ ಓಡಿ ಹೋಗಿಲ್ಲ. ಸಾಕ್ಷಾಧಾರ ಇದ್ದು ಸುದ್ದಿ ಮಾಡಿ ಎಂದರು.
ಹೇಗೆ ರಾಜೀನಾಮೆ ಪತ್ರ ನೀಡಬೇಕು ಎಂಬ ಪರಿಜ್ಞಾನ ಇಲ್ಲ: ಸಚಿವ ಶಿವಾನಂದ ಪಾಟೀಲ್ ರಾಜೀನಾಮೆ ಪತ್ರದ ಬಗ್ಗೆ ಪ್ರತಿಕ್ರಿಯಿಸುತ್ತಾ, ಆರೇಳು ಬಾರಿ ಶಾಸಕರಾಗಿ ಆಯ್ಜೆಯಾದ ಜನಪ್ರತಿನಿಧಿಗೆ ರಾಜೀನಾಮೆ ಹೇಗೆ ಕೊಡಬೇಕು ಎಂಬ ಸಾಮಾನ್ಯ ಪರಿಜ್ಞಾನ ಬೇಕಲ್ಲ. ಗ್ರಾಮ ಪಂಚಾಯತಿ ಸದಸ್ಯನಿಗೆ ಹೇಗೆ ರಾಜೀನಾಮೆ ಪತ್ರ ಕೊಡಬೇಕು ಎಂದು ಗೊತ್ತಿದೆ. ಸ್ವಂತ ಕೈ ಬರಹದಲ್ಲಿ ಇರಬೇಕು. ಸ್ಪೀಕರ್ ಬಳಿ ಖುದ್ದು ಹೋಗಿ ಸ್ವಇಚ್ಛೆಯಿಂದ ರಾಜೀನಾಮೆ ಕೊಡುತ್ತಿದ್ದೇನೆ ಎಂದು ಹೇಳಬೇಕು ಎಂದು ಟೀಕಿಸಿದರು.
ಅದು ಬಿಟ್ಟು ಷರತ್ತು ಹಾಕಿ ರಾಜೀನಾಮೆ ಪತ್ರ ನೀಡಿರುವುದು ಸುಮ್ಮನೆ ನಾಟಕವಾಗಿದೆ. ನಾನು ರಾಜೀನಾಮೆ ಏಕೆ ಕೊಡಲಿ?. ನಾನು ರಾಜೀನಾಮೆ ಕೊಡುತ್ತೇನೆ ಎಂದು ಎಲ್ಲೂ ಹೇಳಿಲ್ಲ. ರಾಜೀನಾಮೆ ಕೊಡುವುದಾದರೆ ಅವರು ಕೊಡಲಿ, ಅವರ ಜೊತೆ ನಾನು ಹೋಗಬೇಕಾ?. ಅವರಿಗೆ ಏನು ನೈತಿಕತೆ ಇದೆ?. ನನ್ನ ರಾಜೀನಾಮೆಗೆ ಸವಾಲು ಹಾಕ್ತಾರೆ. ಅವರಿಗೆ ಭ್ರಷ್ಟಾರದ ಹಣ ಹೆಚ್ಚಾಗಿದೆ. ಅದಕ್ಕೆ ಸವಾಲು ಹಾಕುತ್ತಾ ಹೋಗ್ತಾ ಇದ್ದಾರೆ. ಸುಮ್ಮನೆ ಚುನಾವಣೆಗೆ ಹೋಗಬೇಕಾ?. ಅವರು ರಾಜೀನಾಮೆ ಕೊಡಲಿ. ನಾನು ಅವರ ಎದುರು ಸ್ಪರ್ಧಿಸುತ್ತೇನೆ ಅಂದಿದ್ದೇನೆ. ನಾನು ಅವರ ಚಾಲೆಂಜ್ಗೆ ಹೆದರುವವನಲ್ಲ ಎಂದರು.
Laxmi News 24×7