ಹುಬ್ಬಳ್ಳಿ (ಡಿ. 16): ಲಂಚ ಪಡೆಯುತ್ತಿದ್ದ ಕುಂದಗೋಳ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕನನ್ನು ಎಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ಹುಬ್ಬಳ್ಳಿಯ ಮುತ್ತುಗೌಡ ಗಂಗನಗೌಡರ ಎಂಬುವವರ ಜಮೀನು ಕುಂದಗೋಳದ ಬೆಳ್ಳಿಗಟ್ಟಿ ಬಳಿ ಇದೆ. ಹೆದ್ದಾರಿ ನಿರ್ಮಾಣ ಕಾಮಗಾರಿಗೆ ಹೆದ್ದಾರಿ ಪ್ರಾಧಿಕಾರದವರು ಜಮೀನನ್ನು ವಶಕ್ಕೆ ಪಡೆದಿದ್ದಾರೆ. ಜಮೀನು ಸ್ವಾಧೀನ ಪಡಿಸಿಕೊಂಡ ನಂತರ ಅದರಲ್ಲಿ ಎಷ್ಟು ಮರಗಳಿದ್ದವು ಎಂಬ ಮಾಹಿತಿಯನ್ನ ತೋಟಗಾರಿಕೆ ಇಲಾಖೆಯಿಂದ ಪಡೆಯಬೇಕಿತ್ತು. ಮರಗಳ ಮಾಹಿತಿ ನೀಡಿದರೆ ಹೆದ್ದಾರಿ ಪ್ರಾಧಿಕಾರದವರು ಪರಿಹಾರ ಹಣವನ್ನು ಕೊಡುತ್ತಿದ್ದರು. ಮಾಹಿತಿ ನೀಡಲು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಪರಶುರಾಮ ಹಲಕುರ್ಕಿ ಲಂಚದ ಹಣ ಕೇಳಿದ್ದರು.
ಮುತ್ತುಗೌಡನ ಬಳಿ 50 ಸಾವಿರಕ್ಕೆ ಡಿಮ್ಯಾಂಡ್ ಮಾಡಿದ್ದ ಅಧಿಕಾರಿಗೆ ಮೊದಲು 10 ಸಾವಿರ ರೂಪಾಯಿ ಕೊಡಲಾಗಿತ್ತು. ಉಳಿದ 40 ಸಾವಿರ ರೂಪಾಯಿ ಕೊಡುವಾಗ ಎಸಿಬಿ ದಾಳಿ ನಡೆದಿದ್ದು, ಅಧಿಕಾರಿ ಹಣದ ಸಮೇತ ಸಿಕ್ಕು ಬಿದ್ದಿದ್ದಾನೆ. ಎಸಿಬಿ ಡಿಎಸ್ಪಿ ವೇಣುಗೋಪಾಲ, ಇನ್ಸಪೆಕ್ಟರ್ಗಳಾದ ಜಾಧವ ಮತ್ತು ಹಿರೇಮಠ ಅವರು ದಾಳಿಯಲ್ಲಿ ಭಾಗವಹಿಸಿದ್ದರು.