ನವದೆಹಲಿ, ಮೇ 07: ಜಮ್ಮು ಮತ್ತು ಕಾಶ್ಮೀರದ ಅನಂತ್ನಾಗ್ ಜಿಲ್ಲೆಯಲ್ಲಿರುವ ಪಹಲ್ಗಾಮ್(Pahalgam)ನಲ್ಲಿ ನಡೆದ ದಾಳಿಯ ಪ್ರತೀಕಾರವಾಗಿ ಭಾರತವು ಪಾಕಿಸ್ತಾನದಲ್ಲಿ ವಾಯು ದಾಳಿ ನಡೆಸಿದೆ. 1971ರ ಬಳಿಕ ಮೊದಲ ಬಾರಿಗೆ ಎಲ್ಲಾ ಮೂರು ಪಡೆಗಳಿಂದ ಪಾಕ್ ಮೇಲೆ ದಾಳಿ ನಡೆಸಲಾಗಿದೆ. ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆ ಜಂಟಿ ಕಾರ್ಯಾಚರಣೆ ನಡೆಸಿವೆ. ಭಾರತವು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಒಂಬತ್ತು ಭಯೋತ್ಪಾದಕ ಗುರಿಗಳ ಮೇಲೆ ನಿಖರವಾದ ಕ್ಷಿಪಣಿ ದಾಳಿಗಳನ್ನು ನಡೆಸಿತು. 1971 ರ ಯುದ್ಧದ ನಂತರ ಪಾಕಿಸ್ತಾನದ ವಿರುದ್ಧ ಮೂರು ರಕ್ಷಣಾ ಸೇವೆಗಳನ್ನು ಒಟ್ಟಿಗೆ ಬಳಸಿರುವುದು ಇದೇ ಮೊದಲು.
ಆಪರೇಷನ್ ಸಿಂಧೂರ್(Operation Sindoor) ಅಡಿಯಲ್ಲಿ ಬೆಳಗಿನ ಜಾವ 1.44 ಕ್ಕೆ ಸೇನಾ ದಾಳಿ ನಡೆಸಲಾಯಿತು ಈ ಕಾರ್ಯಾಚರಣೆಯ ಅಡಿಯಲ್ಲಿ, ಪಡೆಗಳು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದಲ್ಲಿನ ಭಯೋತ್ಪಾದಕ ನೆಲೆ ಮೇಲೆ ದಾಳಿ ನಡೆಸಿದವು, ಅವರು ಕೂಡ ಅದೇ ಪ್ರದೇಶದಲ್ಲಿ ಕುಳಿತು ಭಾರತದ ವಿರುದ್ಧ ಭಯೋತ್ಪಾದಕ ಯೋಜಿಸುತ್ತಿದ್ದವು ಎಂದು ಸೇನೆ ತಿಳಿಸಿದೆ.
ದಾಳಿಯಲ್ಲಿ ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆಯ ಮೂರು ಪಡೆಗಳ ನಿಖರವಾದ ದಾಳಿ ಶಸ್ತ್ರಾಸ್ತ್ರ ವ್ಯವಸ್ಥೆಗಳನ್ನು ಬಳಸಲಾಗಿದೆ. ಪಾಕಿಸ್ತಾನದ ಯಾವುದೇ ಮಿಲಿಟರಿ ಸೌಲಭ್ಯಗಳನ್ನು ಗುರಿಯಾಗಿಸಿಕೊಂಡಿಲ್ಲ ಕೇವಲ ಉಗ್ರರ ನೆಲೆ ಮೇಲೆ ದಾಳಿ ನಡೆಸಿದ್ದೇವೆ ಎಂದು ಭಾರತ ಹೇಳಿದೆ. ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಸೇಡು ತೀರಿಸಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ, ರಾತ್ರಿಯಿಡೀ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸಿದರು ಎಂದು ಮೂಲಗಳು ತಿಳಿಸಿವೆ.
Laxmi News 24×7