ರಾಯಚೂರು: ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಹಾಗೂ ಕಾಂಗ್ರೆಸ್ ಮುಖಂಡನ ನಡುವೆ ಲಿಂಗಸುಗೂರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ತೀವ್ರ ವಾಗ್ವಾದ ನಡೆದಿದೆ.
ಮಾನವಿ ತಾಲೂಕಿನ ಉಟಕನೂರು ಗ್ರಾಮದಲ್ಲಿನ ಧಾರ್ಮಿಕ ಕಾರ್ಯಕ್ರಮಕ್ಕೆ ತೆರಳುವ ಮಾರ್ಗಮಧ್ಯೆ ಲಿಂಗಸುಗೂರು ಪಟ್ಟಣದ ಪ್ರವಾಸ ಮಂದಿರದಲ್ಲಿ ಕೆಲ ಮುಖಂಡರೊಂದಿಗೆ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ತಂಗಿದ್ದರು. ಈ ವೇಳೆ ಕಾಂಗ್ರೆಸ್ ಮುಖಂಡ ಹಾಗೂ ಗ್ಯಾರಂಟಿ ಅನುಷ್ಠಾನ ಸಮಿತಿಯ ನಾಮನಿರ್ದೇಶನ ಸದಸ್ಯ ಗದ್ದೆನಗೌಡ ಪಾಟೀಲ್ ನಡುವೆ ಮಾತಿನ ಚಕಮಕಿ ನಡೆದಿದೆ.
“ನಮ್ಮ ರಾಯಚೂರು ಜಿಲ್ಲಾ ಸಚಿವರಾಗಿದ್ದೀರಿ, ನಮ್ಮ ವಿಧಾನಸಭಾ ಕ್ಷೇತ್ರವಿದು. ಇಲ್ಲಿ ಪಕ್ಷದ ಕಾರ್ಯಾಲಯವಿದೆ. ಕಾರ್ಯಕರ್ತರು ಇದ್ದಾರೆ, ಮುಖಂಡರು ಇದ್ದಾರೆ. ಆದರೆ ನೀವು ಯಾವುದೇ ಮಾಹಿತಿ ನೀಡದೆ ಬರುತ್ತೀರಲ್ಲಾ? ಎಂದು ಗದ್ದೆನಗೌಡ ಪಾಟೀಲ್ ಪ್ರಶ್ನೆ ಮಾಡಿದ್ದಾರೆ.
ಆಗ ಗರಂ ಆದ ಸಚಿವರು, ” ನಾನು ಲಿಂಗಸುಗೂರು ಬಂದಿಲ್ಲ. ಬೇರೆ ಕಡೆ ಹೋಗುತ್ತಿರುವೆ, ನಿನ್ಯಾರ ನನ್ನ ಕೇಳೋಕೆ?. ನಾನ್ಸೆನ್ಸ್ ಥರ ಮಾತನಾಡಬೇಡ” ಎಂದು ಗದರಿದ್ದಾರೆ.
ಆ ಬಳಿಕ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ. ಈ ವೇಳೆ ಇದ್ದ ಮುಖಂಡರು ಸಮಾಧಾನ ಪಡಿಸಲು ಮುಂದಾದರೂ ಹಾಗೇ ವಾಗ್ವಾದ ನಡೆಯಿತು. ಇದರಿಂದ ಕೆರಳಿದ ಸಚಿವರು ಅಲ್ಲಿಂದ ತೆರಳಿದರು.
Laxmi News 24×7