ರಾಮನಗರ: ರಿಕ್ಕಿ ರೈ ಮೇಲಿನ ಗುಂಡಿನ ದಾಳಿ ಪ್ರಕರಣದ ಎರಡನೇ ಆರೋಪಿಯಾಗಿರುವ ಮುತ್ತಪ್ಪ ರೈ ಅವರ ಎರಡನೇ ಪತ್ನಿ ಅನುರಾಧ ಅವರು ವಿಚಾರಣೆಗಾಗಿ ಬಿಡದಿ ಪೊಲೀಸ್ ಠಾಣೆಗೆ ಭಾನುವಾರ ಹಾಜರಾಗಿದ್ದರು.
ಭೂಗತ ಲೋಕದ ಮಾಜಿ ಡಾನ್ ಮುತ್ತಪ್ಪ ರೈ ಅವರ ಪುತ್ರ ರಿಕ್ಕಿ ರೈ ಮೇಲಿನ ಗುಂಡಿನ ದಾಳಿ ಪ್ರಕರಣದಲ್ಲಿ ಅನುರಾಧ ಅವರು ಎ2 ಆರೋಪಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಭಾನುವಾರ ತಮ್ಮ ವಕೀಲರ ಜೊತೆ ಪೊಲೀಸ್ ಠಾಣೆಗೆ ಹಾಜರಾಗಿದ್ದರು. ಬಿಡದಿ ಪೊಲೀಸ್ ಠಾಣಾ ಇನ್ಸ್ಪೆಕ್ಟರ್ ಶಂಕರ್ ನಾಯಕ್ ಅವರು ಕೆಲ ಗಂಟೆಗಳ ಕಾಲ ಅನುರಾಧ ಅವರ ವಿಚಾರಣೆ ನಡೆಸಿದರು.
ಶೂಟ್ಔಟ್ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ನನ್ನ ವಿರುದ್ಧ ಯಾಕೆ ದೂರು ಕೊಟ್ಟಿದ್ದಾರೆ ಗೊತ್ತಿಲ್ಲ ಎಂದು ವಿಚಾರಣೆಯಲ್ಲಿ ಅನುರಾಧ ಹೇಳಿದ್ದಾರೆಂಬ ಮಾಹಿತಿ ಇದೆ.
ಪ್ರಕರಣದ ಹಿನ್ನೆಲೆ: ಭೂಗತ ಲೋಕದ ಮಾಜಿ ಡಾನ್ ದಿವಂಗತ ಮುತ್ತಪ್ಪ ರೈ ಅವರ ಕಿರಿಯ ಪುತ್ರ ಹಾಗೂ ಉದ್ಯಮಿ ರಿಕ್ಕಿ ರೈ ಅವರ ಮೇಲೆ ಕಳೆದ ಶುಕ್ರವಾರ ರಾತ್ರಿ (ಏಪ್ರಿಲ್ 18) ರಾಮನಗರದ ಬಿಡದಿ ಬಳಿ ಫೈರಿಂಗ್ ನಡೆದಿತ್ತು. ರಾತ್ರಿ 11:30ರ ಸುಮಾರಿಗೆ ಕಾರಿನಲ್ಲಿ ಬೆಂಗಳೂರಿಗೆ ಹೊರಟಿದ್ದ ರಿಕ್ಕಿ ರೈ ಮೇಲೆ ಗುಂಡಿನ ದಾಳಿ ನಡೆದಿದ್ದು, ಘಟನೆಯಲ್ಲಿ ರಿಕ್ಕಿ ಮೂಗು ಹಾಗೂ ಕೈಗಳಿಗೆ ಗಾಯಗಳಾಗಿತ್ತು. ಬಳಿಕ ಅವರನ್ನು ಬೆಂಗಳೂರಿನ ಹೆಚ್ಎಎಲ್ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ತಿ ವಿವಾದದ ಕುರಿತು ರಿಕ್ಕಿ ರೈ ಮತ್ತು ಅನುರಾಧ ಅವರ ಮಧ್ಯೆ ಇತ್ತೀಚೆಗಷ್ಟೇ ರಾಜಿಯಾಗಿತ್ತು.
Laxmi News 24×7