ಹಾಸನ: ಮಾನವ ಕುಲದ ಲೋಕ ಕಲ್ಯಾಣಕ್ಕಾಗಿ ಮಹಾಪುರುಷರಾದ ಭಗವಾನ್ ಮಹಾವೀರರು ಇಡೀ ಜಗತ್ತಿಗೆ ಶಾಂತಿ, ಅಹಿಂಸೆ ಮತ್ತು ಕರುಣೆಯನ್ನು ಸಾರಿದ್ದಾರೆ ಎಂದು ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದರು.
ಶ್ರವಣಬೆಳಗೊಳ ಕ್ಷೇತ್ರದ ಚಾವುಂಡರಾಯ ಸಭಾಮಂಟಪದಲ್ಲಿ ಗುರುವಾರ ಶ್ರೀ ಜೈನ ಮಠದ ಆಡಳಿತ ಮಂಡಳಿ ಆಯೋಜಿಸಿದ್ದ ಭಗವಾನ್ ಮಹಾವೀರಸ್ವಾಮಿಯ 2624ನೇ ಜನ್ಮ ಕಲ್ಯಾಣ ಮಹೋತ್ಸವವನ್ನು ತೀರ್ಥಂಕರರಿಗೆ ಅರ್ಘ್ಯ, ಪುಷ್ಪಾರ್ಚನೆ ಸಮರ್ಪಣೆಯೊಂದಿಗೆ ಉದ್ಘಾಟಿಸಿ ಅವರು ಮಾತನಾಡಿದರು.
ಭಗವಾನ್ ಮಹಾವೀರರು, ಭಗವಾನ್ ಬಾಹುಬಲಿ ರಾಜಕುಮಾರರಾಗಿ ರಾಜಮನೆತನಗಳಲ್ಲಿ ಜನಿಸಿದರೂ ಸಹ ಎಲ್ಲವನ್ನೂ ತ್ಯಾಗ ಮಾಡಿ ಪರರ ಕಲ್ಯಾಣಕ್ಕಾಗಿ ಹಗಲಿರುಳು ಶ್ರಮಿಸಿದ ಹೃದಯ ಶ್ರೀಮಂತಿಕೆಯ ಮೇರು ವ್ಯಕ್ತಿಗಳು ಎಂದು ಹೇಳಿದರು.
ಜಗತ್ತಿನಲ್ಲೆಡೆ ಇಂದು ಅಶಾಂತಿಯ ವಾತಾವರಣ ನಿರ್ಮಾಣವಾಗಿದೆ. ಕ್ರೋಧಾದಿ ಹಿಂಸೆಗಳು ಸಮಾಜಗಳಲ್ಲಿ ಭುಗಿಲೆದ್ದಿರುವುದರಿಂದ ಶಾಂತಿಯ ಸಂದೇಶದ ಅಗತ್ಯತೆಯನ್ನು ರಾಜ್ಯಪಾಲರು ಒತ್ತಿ ಹೇಳಿದರು. ಜೈನ ಧರ್ಮ ಪ್ರಾಚೀನ ಕಾಲದಿಂದಲೂ ಕ್ಷಮಾ ಧರ್ಮ ಮಾರ್ಗದಲ್ಲಿ ಸಾಗುತ್ತಿದೆ. ಸಹಬಾಳ್ವೆಯೊದಿಗೆ ಎಲ್ಲರೊಂದಿಗೂ ಬದುಕು ಬದುಕಲು ಬಿಡು ಎಂಬ ಮಹಾವೀರರ ವಾಣಿ ಪ್ರಸ್ತುತ ಅಗತ್ಯ ಎಂದರು.
ಕ್ಷೇತ್ರದ ಸುತ್ತಮುತ್ತ ಮಾಂಸದ ಅಂಗಡಿಗಳು, ತ್ಯಾಗಿಗಳಿಗೆ ನೋವು: ಇದೇ ಸಂದರ್ಭದಲ್ಲಿ ಕ್ಷೇತ್ರದ ಮನವಿಗೆ ಸ್ಪಂದಿಸಿದ ರಾಜ್ಯಪಾಲರು ಶ್ರವಣಬೆಳಗೊಳದ ಸುತ್ತಮುತ್ತ ಅನೇಕ ಮಾಂಸದ ಅಂಗಡಿಗಳು ಎಗ್ಗಿಲ್ಲದೇ ತೆರೆದಿದ್ದು, ಸಸ್ಯಾಹಾರಿ ತ್ಯಾಗಿಗಳ ಮನಸ್ಸಿಗೆ ತುಂಬಾ ನೋವಾಗಿರುವುದರ ಬಗ್ಗೆ ಸರ್ಕಾರದ ಗಮನಕ್ಕೆ ತರುವುದಾಗಿ ಹೇಳಿದರು.
ನಾನು ಸನಾತನ ಧರ್ಮದವನಾಗಿದ್ದು, ಕರ್ಮದಲ್ಲಿ ಜೈನ ಧರ್ಮವನ್ನು ಆಚರಿಸುತ್ತಿದ್ದೇನೆ. ನಾನು ಶುದ್ಧ ಶಾಕಾಹಾರಿ. ರಾಜ್ಯದ ರಾಜ ಭವನದಲ್ಲಿಯೂ ಸಹ ಆಗಮಿಸುವ ಅತಿಥಿ ಸತ್ಕಾರಗಳಿಗೆ ಶುದ್ಧ ಶಾಕಾಹಾರವನ್ನೇ ಒದಗಿಸುತ್ತಿರುವುದಾಗಿ ಹೇಳಿದರು.
ಭಗವಾನ್ ಮಹಾವೀರ ಜಯಂತಿಯ ಪ್ರಯುಕ್ತ ಬುಧವಾರ ವಿಶ್ವ ನಮೋಕಾರ ಮಹಾಮಂತ್ರ ದಿನವನ್ನು ಆಚರಿಸಿದ್ದು, ಆ ಮಹಾಮಂತ್ರದಲ್ಲಿ ಯಾವುದೇ ವ್ಯಕ್ತಿಯ ಪ್ರಶಂಸೆ ಮಾಡದೇ ಗುಣದ ಪ್ರಶಂಸೆ ಮಾಡಿದ್ದು, ನಾನು ಪ್ರತಿನಿತ್ಯ ಜಪಿಸುತ್ತಿದ್ದೇನೆ. ಪ್ರತಿಯೊಬ್ಬರೂ ವ್ಯಸನಮುಕ್ತ ಮತ್ತು ಶಾಖಾಹಾರಿಗಳಾಗಬೇಕು ಎಂದು ರಾಜ್ಯಪಾಲರು ಇದೇ ವೇಳೆ ಹೇಳಿದರು.
Laxmi News 24×7