ಬೆಳಗಾವಿ: ಬಸನಗೌಡ ಪಾಟೀಲ ಯತ್ನಾಳ್ ವಿರುದ್ಧ ಕ್ರಮದ ನಿರೀಕ್ಷೆ ಮೊದಲೇ ಇತ್ತು. ವಿರೋಧಿ ಬಣಕ್ಕೂ ಎಚ್ಚರಿಕೆ ನೀಡಲಾಗಿದೆ. ಯತ್ನಾಳ್ ಮರಳಿ ಬಿಜೆಪಿಗೆ ಸೇರುತ್ತಾರೆಂಬ ವಿಶ್ವಾಸ ನನಗಿದೆ ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು.
ಬೆಳಗಾವಿ ಪ್ರವಾಸಿ ಮಂದಿರದಲ್ಲಿ ಇಂದು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಯತ್ನಾಳ್ ಉಚ್ಚಾಟನೆ ವಿಚಾರ ಇದು ಮೊದಲೇ ಸುದ್ದಿ ಇತ್ತು. ಹೈಕಮಾಂಡ್ ಉತ್ತರ ನೀಡಿದಾಗಲೇ ವಾಸನೆ ಬಡಿದಿತ್ತು. ರಾಜ್ಯದ ಜನರ ಭಾವನೆ ತಿಳಿದು ಮಾತಾಡಬೇಕು ಎಂದು ನಿನ್ನೆ ಮಾತಾಡಿರಲಿಲ್ಲ. ಯತ್ನಾಳ್ ನಮ್ಮ ಪಕ್ಷ ಮತ್ತು ರಾಜ್ಯದ ದೊಡ್ಡ ಸಮುದಾಯದ ನಾಯಕ. ಅದೇ ರೀತಿ ಪಕ್ಷದ ನಿರ್ಧಾರ ಪ್ರಶ್ನಿಸುವ ದೊಡ್ಡ ವ್ಯಕ್ತಿಯೂ ನಾನಲ್ಲ. ನಾಳೆ ಯತ್ನಾಳ್ ಬೆಂಗಳೂರಿಗೆ ಬರುತ್ತಾರೆ. ನಾವೆಲ್ಲರೂ ಸೇರಿ ಚರ್ಚಿಸುತ್ತೇವೆ. ಯತ್ನಾಳ್ ವಿರುದ್ಧದ ಕ್ರಮದ ಬಗ್ಗೆ ಪುನರ್ ಪರಿಶೀಲನೆ ಮಾಡುವಂತೆ ಪತ್ರದ ಮುಖೇನ ಹೈಕಮಾಂಡ್ಗೆ ಮನವಿ ಮಾಡಿಕೊಳ್ಳುತ್ತೇವೆ ಎಂದರು.ದೊಡ್ಡ ಸಮುದಾಯದ ನಾಯಕನ ವಿರುದ್ಧ ಕ್ರಮ ಕೈಗೊಳ್ಳಬಾರದಿತ್ತು. ನಮ್ಮ ಪಕ್ಷದ ನಾಯಕರು ಯತ್ನಾಳರನ್ನು ಬಳಸಿಕೊಳ್ಳಬೇಕಿತ್ತು. ಈ ಕ್ರಮ ಆಗಬಾರದಿತ್ತು. ನಮ್ಮ ಮನಸ್ಸಿಗೂ ನೋವಾಗಿದೆ. ನಾನು ಕೂಡ ವೇದಿಕೆ ಮೇಲೆ ಪಕ್ಷದ ನಾಯಕರ ವಿರುದ್ಧ ಮಾತನಾಡಿದ್ದೇನೆ. ಎಸ್ ಟಿ ಸೋಮಶೇಖರಂಥ ಕೆಲವರ ಮೇಲೆ ಪಕ್ಷದ ನಾಯಕರಿಗೆ ಪ್ರೀತಿ ಇದೆ. ಅದಕ್ಕೆ ಅವರ ಮೇಲೆ ಕ್ರಮ ಕೈಗೊಂಡಿಲ್ಲ ಎಂದು ರಮೇಶ್ ಜಾರಕಿಹೊಳಿ ಅಸಮಾಧಾನ ಹೊರಹಾಕಿದರು.
ನಾನು ಮತ್ತು ಯತ್ನಾಳ್ ಸೇರಿ ಎಲ್ಲರೂ ಬಿಜೆಪಿಯಲ್ಲೇ ಇರುತ್ತೇವೆ. ನಾವು ಬಿಜೆಪಿ ಬಿಡುವ ಪ್ರಶ್ನೆಯೇ ಇಲ್ಲ. ಅದೇ ರೀತಿ ಮುಂದಿನ ಸಲ ನಮ್ಮದೇ ಪಕ್ಷ ಅಧಿಕಾರಕ್ಕೆ ಬರುತ್ತದೆ. ಸೂರ್ಯ, ಚಂದ್ರನಿಗೂ ಗ್ರಹಣ ಹಿಡಿಯುತ್ತದೆ. ಹಾಗಾಗಿ, ನಮ್ಮಂಥವರಿಗೆ ಕೆಲ ಸಮಸ್ಯೆ ಆಗಿವೆ. ನಾವೆಲ್ಲರೂ ಗಟ್ಟಿ ಇದ್ದೇವೆ, ಯತ್ನಾಳ್ ಜೊತೆಗೆ ನಾವಿದ್ದೇವೆ. ಯತ್ನಾಳ್ ಒಂಟಿ ಅಲ್ಲ ಎಂದು ರಮೇಶ್ ಜಾರಕಿಹೊಳಿ ಯತ್ನಾಳ್ ಪರ ಬ್ಯಾಟಿಂಗ್ ಬೀಸಿದರು.
ಹೈಕಮಾಂಡ್ ನ ಟಾಪ್ 10 ನಾಯಕರ ಜೊತೆಗೆ ನಿನ್ನೆ ನಾನು ಮಾತನಾಡಿದ್ದೇವೆ. ಕೆಟ್ಟ ಘಳಿಗೆ, ಉಚ್ಚಾಟನೆ ರದ್ದುಪಡಿಸಲು ನಾವು ಹೈಕಮಾಂಡ್ ಗಮನ ಸೆಳೆಯುತ್ತೇವೆ. ನಾಳೆ ಕುಮಾರ ಬಂಗಾರಪ್ಪ ಮನೆಯಲ್ಲಿ ನಮ್ಮ ನಾಯಕರು ಸಭೆ ಮಾಡುತ್ತೇವೆ ಎಂದು ಇದೇ ವೇಳೆ ರಮೇಶ ಜಾರಕಿಹೊಳಿ ತಿಳಿಸಿದರು.
ಬಿಜೆಪಿ ನಮಗೆ ತಾಯಿ ಸಮಾನ, ತಪ್ಪು ಗ್ರಹಿಕೆಯಿಂದ ಆಗಿರಬಹುದು. ಹೈಕಮಾಂಡ್ ಜೊತೆಗೆ ಮಾತನಾಡುತ್ತೇವೆ. ರಾಷ್ಟ್ರೀಯ ಮಟ್ಟದ ನಾಯಕರ ಮೇಲೆ ನಮಗೆ ವಿಶ್ವಾಸ ಇದೆ. ಪುನಃ ಯತ್ನಾಳ್ ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳುತ್ತಾರೆ. ಇನ್ನು ವಿಜಯೇಂದ್ರ ಬಗ್ಗೆ ನಾನು ಇಂದು ಮಾತನಾಡಲ್ಲ, ಹಿಂದಿನ ಮಾತಿಗೆ ನಾನು ಬದ್ಧನಿದ್ದೇನೆ ಎಂದು ರಮೇಶ ಜಾರಕಿಹೊಳಿ ಸ್ಪಷ್ಟಪಡಿಸಿದರು.
Laxmi News 24×7