ಬಿಜೆಪಿ ಬೆಂಬಲಿಗರೇ ಗೋ ಮಾಂಸ ರಫ್ತು ಮಾಡ್ತಾರೆ: ಸಿದ್ದರಾಮಯ್ಯ ಗಂಭೀರ ಆರೋಪ
ಬೆಂಗಳೂರು: ಮೋದಿಯವರು ಪ್ರಧಾನಿಯಾದ ಬಳಿಕ ಗೋ ಮಾಂಸ ರಫ್ತು ಪ್ರಮಾಣ ಏರಿಕೆಯಾಗಿದೆ. ಅಷ್ಟೇ ಅಲ್ಲ, ಗೋ ಮಾಂಸ ರಫ್ತು ಮಾಡುವವರಲ್ಲಿ ಬಹುತೇಕ ಬಿಜೆಪಿ ಬೆಂಬಲಿತರೇ ಇದ್ದಾರೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಈ ಸಂಬಂಧ ಗೋ ಮಾಂಸ ರಫ್ತು ಮಾಡುವ ಸಂಸ್ಥೆಗಳು ಹಾಗೂ ಅದರ ಮಾಲೀಕರ ಪಟ್ಟಿಯನ್ನೂ ಸಿದ್ದರಾಮಯ್ಯ ನೀಡಿದ್ದಾರೆ.
ರಾಜ್ಯ ಬಿಜೆಪಿ ಸರ್ಕಾರ ಪ್ರಸ್ತಾಪಿಸಿರುವ ಗೋಹತ್ಯೆ ನಿಷೇಧ ವಿಧೇಯಕಕ್ಕೆ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ. ಬಿಜೆಪಿ ವಿರುದ್ಧ ಗಂಭೀರ ಆರೋಪವೊಂದನ್ನು ಮಾಡಿದೆ. ಈಗಾಗಲೇ ಗೋಹತ್ಯೆ ನಿಷೇಧ ವಿಧೇಯಕ ವಿಧಾನಸಭೆಯಲ್ಲಿ ಪಾಸ್ ಆಗಿದೆ. ಆದ್ರೆ, ಹೊಸ ಕಾನೂನಿನಲ್ಲಿ ಗೋ ಮಾಂಸ ರಫ್ತಿಗೆ ನಿಷೇಧ ಹೇರಲಾಗಿಲ್ಲ.ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರವನ್ನು ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.
ರಾಜ್ಯ ವಿಧಾನಸಭಾಧ್ಯಕ್ಷರೂ ಕೂಡಾ ಆರ್ಎಸ್ಎಸ್ಗೆ ಬೆಂಬಲ ನೀಡುವ ಕಾರಣ ಗೋ ಹತ್ಯೆ ನಿಷೇಧ ವಿಧೇಯಕ ಪಾಸ್ ಆಗಿದೆ ಎಂಬ ಆರೋಪವನ್ನೂ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಮಾಡಿದ್ದಾರೆ. ದೇಶದ ಅನೇಕ ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿ ಇಲ್ಲ, ರಾಜ್ಯಕ್ಕೆ ಮಾತ್ರ ಏಕೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ದೇಶಕ್ಕೇ ಒಂದು ಪಾಲಿಸಿ, ಕರ್ನಾಟಕ ಹಾಗೂ ಉತ್ತರ ಪ್ರದೇಶ ಮಾತ್ರ ಮತ್ತೊಂದು ನೀತಿ ಏಕೆ ಎಂದು ಸವಾಲೆಸೆದಿರುವ ಸಿದ್ದರಾಮಯ್ಯ, ಕೇರಳ, ಗೋವಾ, ಈಶಾನ್ಯ ರಾಜ್ಯಗಳಲ್ಲಿ ಏಕೆ ಕಾಯ್ದೆ ಜಾರಿ ಇಲ್ಲ ಎಂದು ಪ್ರಶ್ನಿಸಿದ್ದಾರೆ.