ಹಾವೇರಿ : ಇದೇ ತಿಂಗಳ 3 ರಂದು ಮೂವರು ಯುವಕರಿಂದ ಕೊಲೆಯಾದ ಯುವತಿ ಸ್ವಾತಿ ಮನೆಗೆ ಮಾಜಿ ಸಿಎಂ ಹಾಗೂ ಹಾವೇರಿ ಸಂಸದ ಬಸವರಾಜ ಬೊಮ್ಮಾಯಿ ಶನಿವಾರ ಭೇಟಿ ನೀಡಿದ್ದರು.
ಜಿಲ್ಲೆಯ ರಟ್ಟಿಹಳ್ಳಿ ತಾಲೂಕು ಮಾಸೂರು ಗ್ರಾಮದಲ್ಲಿರುವ ಸ್ವಾತಿ ಬ್ಯಾಡಗಿ ನಿವಾಸಕ್ಕೆ ಭೇಟಿ ನೀಡಿದ ಬೊಮ್ಮಾಯಿ ಅವರು ಸ್ವಾತಿ ತಾಯಿ ಮತ್ತು ಸಂಬಂಧಿಕರಿಗೆ ಸಾಂತ್ವನ ಹೇಳಿದರು.
ನಂತರ ಮಾತನಾಡಿದ ಅವರು, ಸ್ವಾತಿ ಬ್ಯಾಡಗಿ ಹತ್ಯೆ ಆಘಾತ ಉಂಟು ಮಾಡಿದೆ. ಸ್ವಾತಿ ತಾಯಿ ಸಣ್ಣ ವಯಸ್ಸಿನಲ್ಲಿ ಪತಿಯನ್ನು ಕಳೆದುಕೊಂಡಿದ್ದಾರೆ. ಕಷ್ಟ ಪಟ್ಟು ತಮ್ಮ ಮೂವರು ಮಕ್ಕಳನ್ನು ಬೆಳೆಸಿದ್ದಾರೆ. ಚೆನ್ನಾಗಿ ಓದಿಸಿದ್ದಾರೆ. ಅವರು ಕೆಲಸ ಮಾಡಿ ತಮ್ಮ ಬದುಕನ್ನು ಕಟ್ಟಿಕೊಳ್ಳುತ್ತಿದ್ದಾರೆ. ಇಂತಹದರಲ್ಲಿ ಈ ರೀತಿ ಘಟನೆಯಾಗಿರುವುದು ಆಘಾತ ತಂದಿದೆ ಎಂದು ತಿಳಿಸಿದರು.
ಈ ರೀತಿಯ ಘಟನೆಗಳು ಸಾಮಾಜಿಕ ಪಿಡುಗಾಗಿದೆ. ಬೆಳೆಯುವ ವಯಸ್ಸಿನ ಹೆಣ್ಣು ಮಕ್ಕಳನ್ನು ದಾರಿ ತಪ್ಪಿಸಿ, ಬೇರೆ ಬೇರೆ ಆಮಿಷವೊಡ್ಡಿ ಅವರನ್ನು ಜಾಲದಲ್ಲಿ ಸಿಲುಕಿಸಿ, ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಾರೆ ಎಂದು ಆರೋಪಿಸಿದರು.
ಅತ್ಯಂತ ಹೀನ ಕೃತ್ಯ : ನಡೆದ ಘಟನೆಯನ್ನ ಊರಲ್ಲಿ ಹಿರಿಯರ ಗಮನಕ್ಕೆ ತಂದು ಬಗೆ ಹರಿಸಬಹುದಿತ್ತು. ಅದನ್ನು ಬಿಟ್ಟು ಅಮಾನೀಯವಾಗಿ, ಅಮಾನುಷವಾಗಿ ಹೆಣ್ಣು ಮಗಳನ್ನು ಕೊಲೆ ಮಾಡುವಂಥದ್ದು ಅತ್ಯಂತ ಹೀನ ಕೃತ್ಯ ಎಂದರು.
Laxmi News 24×7