ದಾವಣಗೆರೆ : ಸಿನಿಮೀಯ ರೀತಿಯಲ್ಲಿ ದರೋಡೆಗೆ ಬಂದಿದ್ದ ಉತ್ತರ ಪ್ರದೇಶದ ದರೋಡೆಕೋರರ ತಂಡದ ನಾಲ್ವರನ್ನು ದಾವಣಗೆರೆ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಮಾತನಾಡಿ, “ನ್ಯಾಮತಿ ಕಡೆಗೆ ಎರಡು ವಾಹನಗಳಲ್ಲಿ ದರೋಡೆ ಮಾಡುವುದಕ್ಕೆ ಬರುತ್ತಿದ್ದಾರೆ ಎಂಬ ಮಾಹಿತಿ ಶನಿವಾರ ನಮಗೆ ಬಂದಿತ್ತು. ಇದರಿಂದ ಎಚ್ಚೆತ್ತುಕೊಂಡು ಎಲ್ಲೆಡೆ ಚೆಕ್ಪೋಸ್ಟ್ಗಳನ್ನು ಹಾಕಿದ್ದೆವು. ಉತ್ತರ ಪ್ರದೇಶ ನಂಬರ್ ಪ್ಲೇಟ್ ಹೊಂದಿರುವ ಎರಡು ಕಾರುಗಳಲ್ಲಿದ್ದ ದರೋಡೆಕೋರರು ಹರಿಹರದಿಂದ ಕಡದಕಟ್ಟೆ ಕಡೆಗೆ ಕ್ರಾಸ್ ಆಗಿದ್ದರು. ಅಲ್ಲಿ ನಮ್ಮ ಪೊಲೀಸ್ ಸಿಬ್ಬಂದಿ ಅವರನ್ನು ತಡೆಯಲು ಹೋದಾಗ, ಅವರು ಕಾರು ನಿಲ್ಲಿಸದೆ ವೇಗವಾಗಿ ಬರುತ್ತಾರೆ. ಇದರಿಂದ ಸಿಬ್ಬಂದಿ ನ್ಯಾಮತಿ ಠಾಣೆ ಇನ್ಸ್ಪೆಕ್ಟರ್ ರವಿ ಅವರಿಗೆ ಫೋನ್ ಮಾಡಿ ಈ ಬಗ್ಗೆ ಮಾಹಿತಿ ನೀಡಿದ್ದರು” ಎಂದರು.
“ನಂತರ ದರೋಡೆಕೋರರು ಕಡದಕಟ್ಟೆಯಿಂದ ಅರಬಗಟ್ಟೆ ಕಡೆಗೆ ಬರುತ್ತಾರೆ. ಅಷ್ಟೊತ್ತಿಗಾಗಲೇ ನಮ್ಮ ಇನ್ಸ್ಪೆಕ್ಟರ್ ಮತ್ತು ಸಿಬ್ಬಂದಿ ಅಲ್ಲಿಗೆ ಆಗಮಿಸಿದ್ದರು. ಉತ್ತರ ಪ್ರದೇಶದ ನಂಬರ್ ಪ್ಲೇಟ್ ಇದ್ದ ಎರಡು ವಾಹನಗಳನ್ನು ತಡೆದು ನಿಲ್ಲಿಸಿ, ಆರೋಪಿಗಳನ್ನು ಬಂಧಿಸಲು ಹೋದಾಗ ಗುಂಪಿನಲ್ಲಿದ್ದ ಓರ್ವನು ಪೊಲೀಸ್ ಸಿಬ್ಬಂದಿಯ ಮೇಲೆಯೇ ದಾಳಿ ಮಾಡಲು ಮುಂದಾಗುತ್ತಾನೆ. ಈ ವೇಳೆ ಇನ್ಸ್ಪೆಕ್ಟರ್ ಎಚ್ಚರಿಕೆ ನೀಡಿದ್ದಾರೆ. ಆದರೂ ಕೇಳದೇ ಸಿಬ್ಬಂದಿಯನ್ನು ಕೆಳಗೆ ಬೀಳಿಸಿ ದಾಳಿ ಮಾಡಲು ಪ್ರಯತ್ನಿಸಿದಾಗ ಇನ್ಸ್ಪೆಕ್ಟರ್ ಒಂದು ಬಾರಿ ಗಾಳಿಯಲ್ಲಿ ಗುಂಡು ಹಾರಿಸಿ, ಆರೋಪಿಯ ಕಾಲಿಗೆ ಫೈರಿಂಗ್ ಮಾಡಿದ್ದಾರೆ. ನಂತರ ಆತನನ್ನು ನ್ಯಾಮತಿ ಆಸ್ಪತ್ರೆ ರವಾನಿಸಿ, ನಂತರ ಅಲ್ಲಿಂದ ದಾವಣಗೆರೆ ಆಸ್ಪತ್ರೆಗೆ ಕರೆದೊಯ್ದಿದ್ದೇವೆ” ಎಂದು ಎಸ್ಪಿ ತಿಳಿಸಿದರು-.
Laxmi News 24×7