ಬೆಂಗಳೂರು: ಉತ್ತರ ಪ್ರದೇಶದಿಂದ ರೈಲಿನ ಮುಖಾಂತರ ನಗರಕ್ಕೆ ಬಂದು ಮನೆಗಳ್ಳತನ ಮಾಡುತ್ತಿದ್ದ ಇಬ್ಬರು ಅಂತಾರಾಜ್ಯ ಕಳ್ಳರನ್ನು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ತಜೀಂ ಆಲಿ ಹಾಗೂ ಸದ್ದಾಂ ಬಂಧಿತ ಆರೋಪಿಗಳು. ಇವರಿಂದ 186 ಗ್ರಾಂ ಚಿನ್ನಾಭರಣ, ಎರಡು ದ್ವಿಚಕ್ರವಾಹನ ಹಾಗೂ 15 ಸಾವಿರ ನಗದು ವಶಕ್ಕೆ ಪಡೆದುಕೊಳ್ಳಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ಧಾರೆ.
ತಿಲಕ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸವಾಗಿದ್ದ ದೂರುದಾರರ ಕುಟುಂಬ ಕಳೆದ ಡಿಸೆಂಬರ್ 13ರಂದು ಮಂತ್ರಾಲಯಕ್ಕೆ ತೆರಳಿತ್ತು. ಇತ್ತ ಮೊದಲ ಬಾರಿಗೆ ರಾಜಧಾನಿಗೆ ಕಾಲಿಟ್ಟಿದ್ದ ಇಬ್ಬರು ಆರೋಪಿಗಳು ಮನೆಗಳ್ಳತನ ಮಾಡಲು ಸಂಚು ರೂಪಿಸಿದ್ದರು. ಬೀಗ ಹಾಕಿದ ಮನೆಗಳನ್ನು ಶೋಧಿಸಲು ಗೋವಿಂದರಾಜನಗರದಲ್ಲಿ ದ್ವಿಚಕ್ರವಾಹನ ಕಳ್ಳತನ ಮಾಡಿದ್ದರು.
ಕದ್ದ ಬೈಕ್ನಲ್ಲಿ ನಗರದೆಲ್ಲೆಡೆ ಸುತ್ತಾಡಿ ಅಂತಿಮವಾಗಿ ದೂರುದಾರರ ಮನೆಯ ಬೀಗ ಒಡೆದು ಲಕ್ಷಾಂತರ ಮೌಲ್ಯದ ನಗ-ನಾಣ್ಯ ದೋಚಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸುಮಾರು 3 ಸಾವಿರಕ್ಕೂ ಹೆಚ್ಚು ಸಿಸಿಟಿವಿ ಪರಿಶೀಲಿಸಿ ಅಂತಿಮವಾಗಿ ಉತ್ತರ ಪ್ರದೇಶದ ಹಾಪೂರ್ ಹಾಗೂ ಮೀರತ್ ಜಿಲ್ಲೆಗಳಲ್ಲಿ ತಲೆಮರೆಸಿಕೊಂಡಿದ್ದ ಇಬ್ಬರನ್ನು ಸೆರೆಹಿಡಿದಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
Laxmi News 24×7