ಕಾರವಾರ: ಹೊನ್ನಾವರ ತಾಲೂಕಿನ ಕಾಸರಕೋಡ ಸಮುದ್ರ ದಂಡೆಯ ಟೊಂಕಾ ಭಾಗದಲ್ಲಿ ನಿರ್ಮಿಸಲು ಉದ್ದೇಶಿಸಿರುವ ವಾಣಿಜ್ಯ ಬಂದರು ನಿರ್ಮಾಣಕ್ಕೆ ಮಂಗಳವಾರ ಪೊಲೀಸ್ ಸರ್ಪಗಾವಲಿನಲ್ಲಿ ಮೋಜಣಿ (ಸರ್ವೆ) ಕಾರ್ಯ ನಡೆಸಲಾಗಿದೆ. ಪ್ರದೇಶದ ಸುತ್ತಮುತ್ತ ವಿಧಿಸಲಾಗಿದ್ದ ನಿಷೇಧಾಜ್ಞೆಯನ್ನು ಫೆಬ್ರವರಿ 26ರ ರಾತ್ರಿ 10 ಗಂಟೆವರೆಗೆ ವಿಸ್ತರಿಸಿ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಮತ್ತೊಂದು ಆದೇಶ ಹೊರಡಿಸಿದ್ದಾರೆ.
ಮಂಗಳವಾರ ಮೀನುಗಾರ ಮಹಿಳೆಯರು ಮತ್ತು ಮೀನುಗಾರರು ಸಮುದ್ರಕ್ಕೆ ಇಳಿದು ಎದೆಮಟ್ಟದ ನೀರಿನಲ್ಲಿ ಮುಳುಗಿ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಸಮುದ್ರದ ಅಲೆಗಳು ರಭಸವಾಗಿ ಅಪ್ಪಳಿಸತೊಡಗಿದಂತೆ ಕೆಲ ಮಹಿಳೆಯರು ಆಯತಪ್ಪಿ ನೀರಿನಲ್ಲಿ ಮುಳುಗಿದ್ದರು. ಅವರಲ್ಲಿ ಇಬ್ಬರು ಮಹಿಳೆಯರು ತೀವ್ರ ಅಸ್ವಸ್ಥಗೊಂಡಿದ್ದು, ದಡದಲ್ಲಿದ್ದ ಪೊಲೀಸರು ಹಾಗೂ ಸ್ಥಳೀಯರು ಅವರನ್ನು ಎತ್ತಿ ದಡಕ್ಕೆ ತಂದು ಪ್ರಾಥಮಿಕ ಚಿಕಿತ್ಸೆ ನೀಡಿ, ಆಸ್ಪತ್ರೆಗೆ ದಾಖಲಿಸಿದ್ದರು.ಈ ಹಿಂದೆಯೂ ಮೂರು ಬಾರಿ ಪೊಲೀಸ್ ಬಂದೋಬಸ್ತ್ನಲ್ಲಿ ಸರ್ವೆ ಮತ್ತು ರಸ್ತೆ ನಿರ್ಮಾಣ ಕೆಲಸ ಮಾಡಲು ಕಂಪನಿ ಪ್ರಯತ್ನಪಟ್ಟಿತ್ತು. ಮೀನುಗಾರರ ಪ್ರತಿಭಟನೆಯ ನಡುವೆಯೂ ಒಮ್ಮೆ ಕಾಮಗಾರಿಯ ಸಾಮಗ್ರಿಗಳನ್ನು ಸಾಗಿಸಲಾಗಿತ್ತು. ಇನ್ನೊಮ್ಮೆ ಮೋಜಣಿಗೆ ಆರಂಭಿಸಿದ್ದರೂ ನಡೆಸಲು ಸಾಧ್ಯವಾಗಿರಲಿಲ್ಲ. ಈ ನಡುವೆ ಪೊಲೀಸರು ಹಾಗೂ ಹೋರಾಟಗಾರರ ನಡುವೆ ತಳ್ಳಾಟ, ನೂಕಾಟ ಉಂಟಾಗಿ ಕೆಲ ಮೀನುಗಾರರು ಹಾಗೂ ಪೊಲೀಸರು ಗಾಯಗೊಂಡಿದ್ದರು. ಈ ಬಗ್ಗೆ ದೂರು, ಪ್ರತಿ ದೂರುಗಳು ದಾಖಲಾಗಿ, ಅನೇಕ ಹೋರಾಟಗಾರರು ಜೈಲುಪಾಲಾಗಿದ್ದರು. ಬಳಿಕ ಹೊನ್ನಾವರ ನ್ಯಾಯಾಲಯದಲ್ಲಿ ಹಲವು ಪ್ರಕರಣಗಳ ವಿಚಾರಣೆ ನಡೆದಿತ್ತು. ನಂತರ ಹೋರಾಟಗಾರರಿಗೆ ಮೇಲಿನ ನ್ಯಾಯಾಲಯದಲ್ಲಿ ಕೆಲ ವಿಷಯದಲ್ಲಿ ಜಯ ಲಭಿಸಿದ್ದರೂ, ಸಂಪೂರ್ಣ ಗೆಲುವು ಸಿಕ್ಕಿರಲಿಲ್ಲ. ಹಾಗಾಗಿ, ಗುತ್ತಿಗೆ ಕಾರ್ಯ ಆಮೆಗತಿಯಲ್ಲಿ ಸಾಗಿ ನನೆಗುದಿಗೆ ಬಿದ್ದಿತ್ತು.
Laxmi News 24×7