ಉಡುಪಿ: ಶ್ರೀ ಕೃಷ್ಣ ಮಠದ ಬೋರ್ಡ್ ಬದಲಾವಣೆ ವಿಚಾರ ರಾಜ್ಯಾದ್ಯಂತ ಚರ್ಚೆಗೆ ಕಾರಣವಾಗಿದೆ. ಬೋರ್ಡ್ ನಲ್ಲಿ ಕನ್ನಡ ಕಾಣೆಯಾಗಿರುವ ಬಗ್ಗೆ ಕನ್ನಡಪರ ಸಂಘಟನೆಗಳು ಮಠದ ಭಕ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಷ್ಟಾಗುತ್ತಲ್ಲೇ ಪರ್ಯಾಯ ಅದಮಾರು ಮಠದಿಂದ ಸ್ಪಷ್ಟನೆ ನೀಡಿದೆ.ಕೃಷ್ಣ ಮಠದ ಪುನಶ್ಚೇತನಗೊಳಿಸುವ ಜವಾಬ್ದಾರಿ ಹೊತ್ತಿರುವ ಕಲಾವಿದ ಪುರುಷೋತ್ತಮ ಅಡ್ವೆ ಮಾತನಾಡಿದ್ದಾರೆ. ಉಡುಪಿ ಕೃಷ್ಣ ಮಠವನ್ನು ಪುನಶ್ಚೇತನಗೊಳಿಸಲಾಗುತ್ತಿದೆ. ಪುನಶ್ಚೇತನದ ಸಂದರ್ಭ ಮಖ್ಯದ್ವಾರದ ಪ್ಲಾಸ್ಟಿಕ್ ಬೋರ್ಡ್ ತೆಗೆಯಲಾಗಿದೆ. ಮರದಲ್ಲಿ ತಯಾರಿಸಿ ಬೋರ್ಡ್ ಅಳವಡಿಸುವ ಯೋಜನೆ ಇದೆ. ದ್ವಾರದ ಮೇಲ್ಭಾಗದಲ್ಲಿ ಕನ್ನಡ ಬೋರ್ಡ್ ಅಳವಡಿಸುತ್ತೇವೆ.
ಕೆಳಭಾಗದಲ್ಲಿ ಸಂಸ್ಕೃತ, ತುಳುವಿನಲ್ಲಿ ಬೋರ್ಡ್ ಅಳವಡಿಸಲಾಗುವುದು. ಈ ಬಗ್ಗೆ ಪರ್ಯಾಯ ಅದಮಾರು ಮಠಾಧೀಶರು ಸೂಚನೆಯನ್ನು ಕೊಟ್ಟಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ ಎಂದು ಹೇಳಿದರು.
ಬೋರ್ಡ್ ಕಾಮಗಾರಿ ಪೂರ್ಣಗೊಳ್ಳುವ ಮೊದಲು ಲಕ್ಷದೀಪೋತ್ಸವ ಬಂದಿದೆ. ಮಠದ ಮುಖ್ಯದ್ವಾರಕ್ಕೆ ಬೋರ್ಡ್ ಅಳವಡಿಸಬೇಕಾದ ಪ್ರಮೇಯ ಬಂತು. ಕನ್ನಡದ ಬೋರ್ಡ್ ಇನ್ನಷ್ಟೇ ತಯಾರು ಆಗಬೇಕಾಗಿದೆ. ಸಂಸ್ಕೃತ ಮತ್ತು ತುಳುವಿನ ಬೋರ್ಡ್ ಮೊದಲೇ ಸಿದ್ಧವಾಗಿರುವ ಕಾರಣ ಅದನ್ನು ಅಳವಡಿಸಲಾಗಿದೆ. ತುಳುವಿಗೆ ಮಾನ್ಯತೆ ಕೊಡುವ ಉದ್ದೇಶದಿಂದ ಈ ಬೋರ್ಡ್ ಅಳವಡಿಸಲಾಗಿದೆ. ಕನ್ನಡ ಬೋರ್ಡ್ ಸಿದ್ಧವಾದ ಕೂಡಲೇ ಅದನ್ನು ಮೇಲ್ಭಾಗದಲ್ಲಿ ಅಳವಡಿಸುತ್ತೇವೆ ಎಂದರು.