ಬೆಂಗಳೂರು: ಲಿಂಗಾಯತ ಸಮುದಾಯವನ್ನು ಒಬಿಸಿಗೆ ಸೇರಿಸಿ ಎಂದು ಕೇಳುವುದರಲ್ಲಿ ತಪ್ಪಿಲ್ಲ. ಸಂವಿಧಾನದ 334ನೇ ವಿಧಿಯಲ್ಲೇ ಇದನ್ನು ತಿಳಿಸಲಾಗಿದೆ. ಆದರೆ, ಯಡಿಯೂರಪ್ಪ ಕುರ್ಚಿ ಉಳಿಸಿಕೊಳ್ಳಲು ಇಂತಹ ತಂತ್ರ ಮಾಡುತ್ತಿದ್ದಾರೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಿಎಂ ಬಿಎಸ್ವೈ ವಿರುದ್ಧ ಆರೋಪ ಮಾಡಿದ್ದಾರೆ.
ತಮ್ಮ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಒಬಿಸಿ ಪಟ್ಟಿಗೆ ಸೇರ್ಪಡೆ ಮಾಡಲು ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ಅಧ್ಯಯನ ನಡೆಸಿ ವರದಿ ನೀಡಬೇಕು. ಪಟ್ಟಿಗೆ ಸೇರಿಸುವ, ರದ್ದು ಮಾಡುವ ಅಧಿಕಾರ ಆಯೋಗಕ್ಕೆ ಇದೆ ಎಂದರು.
ಲಿಂಗಾಯತ ಸಮುದಾಯವನ್ನು ಒಬಿಸಿಗೆ ಸೇರಿಸಬೇಕಾದರೆ ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ವರದಿ ನೀಡಬೇಕು. ಅಲ್ಲಿಯ ತನಕ ಒಬಿಸಿಗೆ ಸೇರ್ಪಡೆ ಮಾಡಲು ಅವಕಾಶ
ಇಲ್ಲ, ಆಯೋಗಕ್ಕೆ ಈ ಸಂಬಂಧ ಅಧಿಕಾರವಿದ್ದು, ಆಯೋಗ ವರದಿ ಸಲ್ಲಿಸಿದ ನಂತರ ಅದರ ಬಗ್ಗೆ ಗಮನಹರಿಸಬಹುದು ಎಂದು ಹೇಳಿದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ತೊಲಗಿದರೆ ಉತ್ತಮ ವಾತಾವರಣ ನಿರ್ಮಾಣ ಆಗುತ್ತದೆ. ಅಲ್ಲಿಯ ತನಕ ಯಾವುದೇ ಸಮಸ್ಯೆಗಳಿಗೆ ಪರಿಹಾರ ದೊರೆಯುವುದಿಲ್ಲ. ಬೊಕ್ಕಸದ ಹಣವನ್ನು ನಿಗಮ-ಮಂಡಳಿಗಳೆಂದು ಅನಗತ್ಯವಾಗಿ ವೆಚ್ಚ ಮಾಡಲಾಗುತ್ತಿದೆ ಎಂದು ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ಬಿಜೆಪಿ ವಲಸಿಗರ ಸಭೆ ಕುರಿತು ಕೇಳಿದ ಪ್ರಶ್ನೆಗೆ ಸಿದ್ದರಾಮಯ್ಯ, ನಾನು ಅದರ ಬಗ್ಗೆ ಮಾತನಾಡುವುದಿಲ್ಲ. ಅವರು ಸಭೆ ಮಾಡಲಿ, ಬಿಡಲಿ ನಮಗೇನು. ಇವರು ವ್ಯಾಪಾರ ಮಾಡಿಕೊಂಡು ಅಲ್ಲಿಗೆ ಹೋದವರು. ಅವರ ವ್ಯಾಪಾರ ನನಗೇನು ಗೊತ್ತು ಎಂದು ಬಿಜೆಪಿ ವಲಸಿಗರನ್ನು ಕುಟುಕಿದರು.