ಗದಗ: ಹೈದರಾಬಾದ್, ಕರ್ನಾಟಕ, ಗೋವಾ ತಮಿಳುನಾಡು ರಾಜ್ಯ ಪ್ರವಾಸಕ್ಕೆ ಹೊರಟಿದ್ದ ಬಸ್ಸನ್ನು ಗದಗ ಆರ್ ಟಿಓ ಅಧಿಕಾರಿಗಳು ವಶಕ್ಕೆ ಪಡೆದ ಹಿನ್ನೆಲೆಯಲ್ಲಿ ಬಸ್ಸಿನಲ್ಲಿದ್ದ ಮಕ್ಕಳು, ಮಹಿಳೆಯರು ಸೇರಿದಂತೆ 49 ಪ್ರವಾಸಿಗರು ಗದಗ ಆರ್ ಟಿಓ ಕಚೇರಿ ಬಳಿಯೇ ರಾತ್ರಿ ಕಳೆದ ಘಟನೆ ಬೆಳಕಿಗೆ ಬಂದಿದೆ.
ಬಸ್ಸಿನ ದಾಖಲೆ ಪತ್ರಗಳು ಸರಿಯಾಗಿ ಇರದ ಕಾರಣ ಹೆದ್ದಾರಿಯಲ್ಲಿ ವಾಹನಗಳನ್ನು ತಪಾಸಣೆ ನಡೆಸುತ್ತಿದ್ದ ಅಧಿಕಾರಿಗಳು ಆಂಧ್ರಪ್ರದೇಶದ ಬಸ್ಸನ್ನು ತಪಾಸಣೆ ನಡೆಸಿದ್ದಾರೆ ಈ ವೇಳೆ ಬಸ್ಸಿನ ದಾಖಲೆ ಪತ್ರಗಳು ಸರಿಯಾಗಿರಲಿಲ್ಲ ಅಲ್ಲದೆ ಬಸ್ಸಿನ ಚೆಸ್ಸಿ, ಇಂಜಿನ್ ನಂಬರ್ ತಿರುಚಲಾಗಿತ್ತು ಇದರಿಂದ ಗದಗ ಆರ್ ಟಿಓ ಅಧಿಕಾರಿಗಳು ಬಸ್ಸನ್ನು ಸೀಜ್ ಮಾಡಿ ಆರ್ ಟಿಓ ಕಚೇರಿಗೆ ತಂದಿದ್ದಾರೆ ಈ ವೇಳೆ ದಿಕ್ಕು ತೋಚದ ಪ್ರವಾಸಿಗರು ಆರ್ ಟಿಓ ಕಚೇರಿ ಹೊರಗೆ ದಿನ ಕಳೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಹೈದರಾಬಾದ್ ನಿಂದ ರಾಯಚೂರು ಮಾರ್ಗವಾಗಿ ಗದಗ ನಗರಕ್ಕೆ ಬರುತ್ತಿದ್ದ AP03 TE8520 ನಂಬರಿನ ಬಸ್ಸನ್ನು ಹೆದ್ದಾರಿಯಲ್ಲೇ ಸೀಜ್ ಮಾಡಿದ್ದಾರೆ.
ಪ್ರವಾಸಿಗರ ಗೋಳು:
ಹೈದರಾಬಾದ್, ಕರ್ನಾಟಕ, ಗೋವಾ ತಮಿಳುನಾಡು ಸೇರಿದಂತೆ 10 ದಿನಗಳ ರಾಜ್ಯ ಪ್ರವಾಸ ಕೈಗೊಂಡಿರುವ ಆಂಧ್ರಪ್ರದೇಶದ ಕಡಪಾ ಜಿಲ್ಲೆಯ ಪುಲಿವೆಂದುಲಾ ಪಟ್ಟಣದ ನಿವಾಸಿಗಳು ಬಸ್ ಸೀಜ್ ಆದ ಹಿನ್ನೆಲೆಯಲ್ಲಿ ಆರ್ ಟಿಒ ಕಚೇರಿಯಲ್ಲೇ ಠಿಕಾಣಿ ಹೂಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ, ಅಲ್ಲದೆ ಪ್ರವಾಸಿಗರು ಬದಲಿ ಬಸ್ಸಿನ ವ್ಯವಸ್ಥೆ ಮಾಡಿಕೊಡುವಂತೆ ಬಸ್ ಮಾಲೀಕರಲ್ಲಿ ಬೇಡಿಕೆ ಇಟ್ಟಿದ್ದಾರೆ.