ಬೆಂಗಳೂರು, ನ.19-ಮುಂದಿನ ವರ್ಷದಿಂದ ಹೆದ್ದಾರಿಗಳ ಟೋಲ್ಗಳಲ್ಲಿ ಹಾದು ಹೋಗಬೇಕಾದರೆ ಫಾಸ್ಟ್ಯಾಗ್ ಕಡ್ಡಾಯ ಎಂಬ ನಿರ್ಧಾರ ವಾಹನ ಸವಾರರನ್ನು ಕೆರಳಿಸಿದ್ದು, ಎಲ್ಲೆಡೆ ವ್ಯಾಪಕ ಆಕ್ರೋಶ ಕೇಳಿಬರುತ್ತಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸರ್ಕಾರದ ನಿರ್ಧಾರದ ವಿರುದ್ಧ ವಾಗ್ದಾಳಿಗಳು ನಡೆಯುತ್ತಿವೆ. ಸರ್ಕಾರ ಸರಿಯಾದ ಸೌಲಭ್ಯ ನೀಡದೆ, ಬದಲಿ ರಸ್ತೆ ನಿರ್ಮಿಸದೆ ಜನರನ್ನು ಸುಲಿಗೆ ಮಾಡುವಂತಹ ಹುಚ್ಚು ನಿರ್ಧಾರಗಳನ್ನು ಪ್ರಕಟಿಸಿರುವುದು ಪ್ರಶ್ನಾರ್ಹವಾಗಿದೆ.
ಜನವರಿ 1ರಿಂದ ಟೋಲ್ ಇರುವ ಹೆದ್ದಾರಿಗಳಲ್ಲಿ ಸಂಚರಿಸಬೇಕಾದರೆ ಫಾಸ್ಟ್ಯಾಗ್ ಕಡ್ಡಾಯ. ಫಾಸ್ಟ್ಯಾಗ್ ಇಲ್ಲದೆ ಹೋಗುವ ವಾಹನಗಳಿಗೆ ದುಪ್ಪಟ್ಟು ದಂಡ ವಿಧಿಸುವ ನಿರ್ಧಾರವನ್ನು ಪ್ರಕಟಿಸಲಾಗಿದೆ. ಏಪ್ರಿಲ್ 1ರಿಂದ ವಾಹನಗಳಿಗೆ ಥರ್ಡ್ಪಾರ್ಟಿ ವಿಮೆ ಮಾಡಿಸುವ ಸಂದರ್ಭದಲ್ಲೂ ಫಾಸ್ಟ್ಯಾಗ್ ಕಡ್ಡಾಯ ಎಂಬ ನಿಯಮ ರೂಪಿಸಲಾಗಿದೆ.
ಜತೆಗೆ 2017ರ ಹಿಂದೆ ಖರೀದಿ ಮಾಡಿರುವ ವಾಹನಗಳಿಗೆ ಎಫ್ಸಿ ಮಾಡಿಸಬೇಕಾದರೂ ಫಾಸ್ಟ್ಯಾಗ್ ಕಡ್ಡಾಯಗೊಳಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಈ ನಿರ್ಧಾರ ಜನರ ಹಗಲು ದರೋಡೆಗೆ ಸರ್ಕಾರವೇ ಲೈಸೆನ್ಸ್ ನೀಡಿದಂತಿದೆ. ರಾಜ್ಯದಲ್ಲಿರುವ ಬಹುತೇಕ ಹೆದ್ದಾರಿಗಳಲ್ಲಿ ಸುಸಜ್ಜಿತವಾಗ ಪರ್ಯಾಯ ರಸ್ತೆಗಳಿಲ್ಲ. ಪ್ರಮುಖವಾಗಿ ಬೆಂಗಳೂರಿನಿಂದ ಹೊರ ಹೋಗುವ ತುಮಕೂರು ರಸ್ತೆಯಲ್ಲಿ ಮೂರು ಕಡೆ ಟೋಲ್ ಕಟ್ಟಬೇಕಿದೆ. ನಾಗಸಂದ್ರದ ಬಳಿ ಇರುವ ಟೋಲ್ನಲ್ಲಿ ಹಣ ಪಾವತಿಸುವ ವಾಹನಗಳಿಗೆ ಮಾತ್ರ ಸುಸಜ್ಜಿತ ರಸ್ತೆ ಇದೆ.
ಟೋಲ್ನಲ್ಲಿ ಹಾದು ಹೋಗಲು ನಿರಾಕರಿಸುವ ವಾಹನಗಳಿಗೆ ಸರಿಯಾದ ರಸ್ತೆಗಳೇ ಇಲ್ಲ. ಹೆಸರಿಗೆ ಪರ್ಯಾಯ ರಸ್ತೆ ಇದ್ದರೂ ಅದು ತ್ರಿಚಕ್ರ ವಾಹನ ಮಾತ್ರ ಸುಲಭವಾಗಿ ಹೋಗುವಷ್ಟು ಕಿಷ್ಕಿಂದೆಯಾಗಿದೆ. ಮಾದಾವರ ಬಳಿ ಇರುವ ಟೋಲ್ನಲ್ಲೂ ರಸ್ತೆ ಸುಸಜ್ಜಿತವಾಗಿಲ್ಲ.