ಚಾಮರಾಜನಗರ: ಬೊಲೆರೋ ಮತ್ತು ಬೈಕ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದಾರೆ. ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಧನಗೆರೆ-ಸತ್ತೇಗಾಲ ಮುಖ್ಯರಸ್ತೆಯಲ್ಲಿ ಬೀಕರ ಅಪಘಾತ ಸಂಭವಿಸಿದೆ. ಸಾವನ್ನಪ್ಪಿದ ಮೂವರು ಬೈಕ್ ಸವಾರರಾಗಿದ್ದಾರೆ.
ಹನೂರು ತಾಲೂಕಿನ ಮಾರ್ಟಳ್ಳಿ ಸಮೀಪದ ಪಳನಿಮೇಡು ಗ್ರಾಮದ ಡೇವಿಡ್, ಶೇಷುರಾಜು ಹಾಗೂ ಶೆಟು ಸಾವನ್ನಪ್ಪಿದ್ದ ದುರ್ದೈವಿಗಳು. ಸತ್ತೇಗಾಲ ಹಾಗೂ ಧನಗೆರೆ ಮುಖ್ಯರಸ್ತೆಯಲ್ಲಿ ಬೆಂಗಳೂರಿನಿಂದ ಸ್ವಗ್ರಾಮಕ್ಕೆ ಬೈಕ್ ನಲ್ಲಿ ಮೂವರು ತೆರಳುತ್ತಿದ್ದರು. ಬೈಕ್ ಗೆ ಕೊಳ್ಳೇಗಾಲದಿಂದ ಸತ್ತೇಗಾಲದ ಕಡೆಗೆ ಹೋಗುತ್ತಿದ್ದ ಬೊಲೆರೋ ವಾಹನ ಡಿಕ್ಕಿ ಹೊಡೆದಿದೆ. ಬೊಲೆರೋ ಚಾಲಕ ಅಜಾಗರೂಕತೆಯಿಂದ ಬೈಕ್ ಸವಾರಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದಾರೆ.
ವಿಷಯ ತಿಳಿದು ಡಿವೈಎಸ್ ಪಿ ನಾಗರಾಜು, ಸರ್ಕಲ್ ಇನ್ಸ್ಪೆಕ್ಟರ್ ಶ್ರೀಕಾಂತ್, ಗ್ರಾಮಾಂತರ ಎಸ್ಐ ಅಶೋಕ್ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ ಶವಗಳನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಶವಾಗಾರಕ್ಕೆ ಸಾಗಿಸಿದರು. ಈ ಸಂಬಂಧ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.