ಬೆಳಗಾವಿ: ಡಿಸಿಸಿ ಬ್ಯಾಂಕ್ 3 ಕ್ಷೇತ್ರಗಳಿಗೆ ಇಂದು ನಡೆದ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ನೇಕಾರ ಸಹಕಾರಿ ಸಂಘದಿಂದ ಸ್ಪರ್ಧಿಸಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಆಪ್ತ ಕೃಷ್ಣಾ ಅನಗೋಳ್ಕರ್ ಗೆಲವು ಸಾಧಿಸಿದ್ದಾರೆ.
ರಾಮದುರ್ಗ, ಖಾನಾಪುರ ಹಾಗೂ ಸಹಕಾರಿ ಸಂಘ ಮೂರು ಕ್ಷೇತ್ರಗಳ ಅಭ್ಯರ್ಥಿಗಳು ಅವಿರೋಧ ಆಯ್ಕೆ ವಿರೋಧಿಸಿದ್ದರು. ಈ ಹಿನ್ನೆಲೆಯಲ್ಲಿ ಮೂರು ಕ್ಷೇತ್ರಗಳಿಗೆ ಇಂದು ಚುನಾವಣೆ ನಡೆದಿದ್ದು, ಫಲಿತಾಂಶ ಪ್ರಕಟಗೊಂಡಿದೆ.
ಮೂರು ಕ್ಷೇತ್ರದ ಫಲಿತಾಂಶದಲ್ಲಿ ಮೂವರು ಪ್ರಭಾವಿ ನಾಯಕರ ಆಪ್ತರು ಗೆಲವು ಸಾಧಿಸಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ.
ಸಹಕಾರಿ ಕ್ಷೇತ್ರ ಶಾಸಕ ಸತೀಶ ಜಾರಕಿಹೊಳಿ ಅವರ ಆಪ್ತ ಕೃಷ್ಣಾ ಅನಗೋಳ್ಕರ್ 55 ಮತ ಪಡೆದು ಜಯಭೇರಿ ಬಾರಿಸಿದ್ದಾರೆ, ಈ ಕ್ಷೇತ್ರದಲ್ಲಿ ಕತ್ತಿ ಬೆಂಬಲಿತ ಅಭ್ಯರ್ಥಿ ಗಜಾನನ ಕ್ವಳ್ಳಿ ಪೈಪೋಟಿ ನೀಡಿ 38 ಮತ ಪಡೆದು ಕೊನೆಗೆ ಪರಾಜಯಗೊಂಡಿದ್ದಾರೆ.
ರಾಮದುರ್ಗ ಪಿಕೆಪಿಎಸ್ ಪ್ರತಿನಿಧಿಯಾಗಿ ಶ್ರೀಕಾಂತ ಢವಣ 16 ಮತ ಪಡೆದು ಜಯಗಳಿಸಿದ್ದಾರೆ. ಇವರು ಕತ್ತಿ ಬಣದಲ್ಲಿ ಗುರುತಿಸಿಕೊಂಡಿದ್ದಾರೆ.
ಇನ್ನು ಪ್ರತಿಷ್ಠೆ ಕಣವಾಗಿದ್ದ ಖಾನಾಪುರ ಕ್ಷೇತ್ರದಲ್ಲಿ ಅಂಜಲಿ ನಿಂಬಾಳ್ಕರ್ ಅವರಿಗೆ ಎರಡು ಮತಗಳಲ್ಲಿ ಹಿನ್ನೆಡೆಯಾಗಿದ್ದು, ರಮೇಶ ಜಾರಕಿಹೊಳಿ ಬೆಂಬಲಿತ ಎಂಇಎಸ್ ಅಭ್ಯರ್ಥಿ ಅರವಿಂದ ಪಾಟೀಲ್ ಗೆಲವು ಸಾಧಿಸಿದ್ದಾರೆ