ಮಂಗಳೂರು(ದಕ್ಷಿಣ ಕನ್ನಡ): ರಾಹುಲ್ ಗಾಂಧಿ ಅವರು 224 ಕ್ಷೇತ್ರಕ್ಕೂ ಹೋಗಿ ಬರಲಿ ಎಂದು ವಿನಂತಿ ಮಾಡುತ್ತೇನೆ.
ಅವರು ಹೋದಲೆಲ್ಲ ಕಾಂಗ್ರೆಸ್ ಸೋತಿದೆ. ಕಾಂಗ್ರೆಸ್ನ ಜಾಯಮಾನವೇ ಭ್ರಷ್ಟಾಚಾರವಾಗಿದೆ. ಭ್ರಷ್ಟಾಚಾರದ ಪಿತಾಮಹ ಕಾಂಗ್ರೆಸ್ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆರೋಪಿಸಿದ್ದಾರೆ.
ಮಂಗಳೂರಿನ ಡೊಂಗರಕೇರಿಯ ಸುಧೀಂದ್ರ ಸಭಾಭವನದಲ್ಲಿ ಆಯೋಜಿಸಲಾಗಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕಾರ್ಯಕರ್ತರ ಜೊತೆಗೆ ನಡೆದ ಸಂವಾದದ ವರ್ಚುಯಲ್ ಸಭೆಯನ್ನು ವೀಕ್ಷಿಸಿದ ಬಳಿಕ ನಳಿನ್ ಕುಮಾರ್ ಕಟೀಲ್ ಮಾತನಾಡಿದರು. ಮನೆ ಮನೆಗೆ ಹೋಗಿ ಯಾವ ವಿಚಾರ ಹೇಳಬೇಕು. ನಮ್ಮ ದೇಶದ ನಮ್ಮ ರಾಜ್ಯದ ಸರಕಾರಗಳ ಸಾಧನೆ, ಡಬಲ್ ಇಂಜಿನ್ ಸರಕಾರದ ಸಾಧನೆ, ನಮ್ಮ ಸರಕಾರ ನೀಡಿರುವ ಕೊಡುಗೆಗಳನ್ನು ಜನರ ಬಳಿಗೆ ಮುಟ್ಟಿಸುವ ಬಗ್ಗೆ ಪ್ರಧಾನಮಂತ್ರಿ ಗಳು ಕಾರ್ಯಕರ್ತರಿಗೆ ಪ್ರೇರಣೆ ನೀಡುವ ಮೂಲಕ ಹೇಳಿದ್ದಾರೆ.
ಮನೆಮನೆಗೆ ಪ್ರಚಾರಕ್ಕೆ ಹೋದಾಗ ಕಾರ್ಯಕರ್ತ ಹೇಗಿರಬೇಕು. ಬಿಜೆಪಿ ಕಾರ್ಯಕರ್ತ ಚುನಾವಣೆಯನ್ನು ಹೇಗೆ ಸವಾಲಾಗಿ ಸ್ವೀಕರಿಸಬೇಕು ಎಂಬುದನ್ನು ಪ್ರಧಾನಮಂತ್ರಿ ಕಾರ್ಯಕರ್ತರಿಗೆ ಪ್ರೇರಣೆ ನೀಡಿದ್ದಾರೆ. ಪ್ರಧಾನಮಂತ್ರಿಗಳು ಕಾರ್ಯಕರ್ತರಿಗೆ ಉತ್ಸಾಹ ತುಂಬಿದ್ದಾರೆ. ಇಡೀ ರಾಜ್ಯದಲ್ಲಿ ಹೊಸ ವಾತಾವರಣ ನಿರ್ಮಾಣವಾಗಿದೆ ಎಂದರು.
ಈಗಾಗಲೇ ಮಹಾಚುನಾವಣಾ ಪ್ರಚಾರದ ಭಾಗವಾಗಿ ಮನೆ ಮನೆ ಸಂಪರ್ಕಗಳನ್ನು ಪ್ರಾರಂಭ ಮಾಡಿದ್ದೇವೆ. ಅದಕ್ಕೆ ವೇಗ ಮತ್ತು ಉತ್ಸಾಹ ಎರಡು ತುಂಬಿದೆ. ಪ್ರಧಾನಮಂತ್ರಿಗಳ ಈ ಸಭೆಯಿಂದ ಕಾರ್ಯಕರ್ತರಿಂದ ಇನ್ನಷ್ಟು ಉತ್ಸಾಹ ಬರಲಿದೆ ಎಂದರು. ಪ್ರಧಾನಮಂತ್ರಿಗಳ ಸಂವಾದದಲ್ಲಿ ತನ್ನ ಪ್ರಶ್ನೆಗೆ ಉತ್ತರಿಸಿದ ಬಗ್ಗೆ ಬಿಜೆಪಿ ಕಾರ್ಯಕರ್ತ ಅರುಣ್ ಶೇಟ್ ಮಾತನಾಡಿ, ನಾನು ಕೇಳಿದ ಪ್ರಶ್ನೆಗೆ ಪ್ರಧಾನಮಂತ್ರಿಗಳು ಸುಂದರವಾಗಿ ಉತ್ತರ ನೀಡಿದ್ದಾರೆ.