ಕೊಪ್ಪಳ, ಅ.18- ಕೊರೊನಾದಿಂದಾಗಿ ಈಗಾಗಲೇ ಸಿನಿಮಾ ರಂಗ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದು, ಲಾಕ್ಡೌನ್ ಬಳಿಕ ಈಗಷ್ಟೇ ಸಿನಿಮಾ ರಂಗದ ಚಟುವಟಿಕೆಗಳು ನಡೆಯುತ್ತಿವೆ. ಕಲಾವಿದರನ್ನು ಪ್ರೋತ್ಸಾಹಿಸಲು ಸಿನಿಮಾ ಮಂದಿರಗಳಿಗೆ ಬಂದು ಸಿನಿಮಾ ನೋಡಿ ನಮ್ಮ ನೆರವಿಗೆ ನಿಲ್ಲಬೇಕು ಎಂದು ನಟ ಪುನೀತ್ ರಾಜïಕುಮಾರ್ ರಾಜ್ಯದ ಜನತೆಯಲ್ಲಿ ಮನವಿ ಮಾಡಿದರು.
ಜಿಲ್ಲಾಯ ಗಂಗಾವತಿ ತಾಲೂಕಿನ ಮಲ್ಲಾಪುರದ ಬಳಿ ನಡೆಯುತ್ತಿರುವ ಜೇಮ್ಸ್ ಚಿತ್ರದ ಶೂಟಿಂಗ್ನಲ್ಲಿ ಪಾಲ್ಗೊಂಡು ಬಳಿಕ ಮಾತನಾಡಿದ ಅವರು, ಲಾಕ್ಡೌನ್ನಿಂದಾಗಿ ಸುದೀರ್ಘ 7 ತಿಂಗಳ ಕಾಲ ಚಿತ್ರರಂಗದ ಕಾರ್ಯಚಟುವಟಿಕೆಗಳೆಲ್ಲವೂ ಬಂದ್ ಆಗಿದ್ದವು. ಕಲಾವಿದರನ್ನು ಪ್ರೋತ್ಸಾಹಿಸಲು ಸಿನಿಮಾ ಮಂದಿರಗಳಿಗೆ ಬಂದು ಸಿನಿಮಾ ನೋಡಿ ನಮ್ಮ ನೆರವಿಗೆ ನಿಲ್ಲಿ ಎಂದು ಮತ್ತೊಮ್ಮೆ ಮನವಿ ಮಾಡಿದರು.
ಉತ್ತರ ಕರ್ನಾಟಕದಲ್ಲಿನ ಪ್ರವಾಹ, ನೆರೆ ಸಂಕಷ್ಟದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಪ್ರಕೃತಿಯ ಮುಂದೆ ನಾವೆಲ್ಲ ಸಣ್ಣವರು. ನಿಸರ್ಗದ ನಿಯಮವನ್ನು ನಾವು ಪಾಲನೆ ಮಾಡಬೇಕು. ಸಂಕಷ್ಟದ ತೀವ್ರತೆ ಕಂಡು ಬಂದರೆ ನಾನು ವೈಯಕ್ತಿಕವಾಗಿ ಮತ್ತು ಇಡೀ ಚಿತ್ರ ತಂಡ, ಸಂತ್ರಸ್ತರ ನೆರವಿಗೆ ನಿಲ್ಲುತ್ತದೆ ಎಂದು ಭರವಸೆ ನೀಡಿದರು. ನಾವೆಲ್ಲ ನಮ್ಮ ನಮ್ಮ ಸುರಕ್ಷತೆಯಲ್ಲಿ ಇರೋದು ತುಂಬಾ ಮುಖ್ಯ. ಮುಂಜಾಗ್ರತಾ ಕ್ರಮ ಕೈಗೊಂಡು ಜನ ಚಿತ್ರಮಂದಿರಕ್ಕೆ ಬರಬೇಕು ಎಂದು ಪುನೀತ್ ತಿಳಿಸಿದರು.
ಕೊಪ್ಪಳ ನನಗೇನು ಹೊಸದಲ್ಲ. ಅಪ್ಪಾಜಿ ನೆನಪು ಇಲ್ಲಿದೆ. ಆ ಜಾಗ ನೋಡಿಕೊಂಡು ಬಂದಿದ್ದೇನೆ ತುಂಬಾ ಖುಷಿಯಾಯ್ತು. ಅಪ್ಪಾಜಿಯವರ ಭಾಗ್ಯವಂತ ಚಿತ್ರೀಕರಣ ಇಲ್ಲಾ ಆಗಿದೆ. ಅಪ್ಪಾಜಿ ನೆನೆದು ಭಾಗ್ಯವಂತ ಚಿತ್ರದ ಗೀತೆಯನ್ನು ನಟ ಪುನೀತ್ ರಾಜಕುಮಾರ್ ಹಾಡಿದರು.