ಬೆಳಗಾವಿ : ಅಧಿಕಾರವಿದ್ದಾಗ ಖಾನಾಪುರದ ಜನರಿಗಾಗಿ ಏನನ್ನೂ ಮಾಡದ ಕಾಂಗ್ರೆಸ್ ಮತ್ತು ಜೆಡಿಎಸ್ ಈಗ ಚುನಾವಣೆ ಹತ್ತಿರ ಬರುತ್ತಿರುವುದರಿಂದ ಯಾತ್ರೆಯ ನೆಪ ಮಾಡಿಕೊಂಡು ಜನರ ಬಳಿ ಬರುತ್ತಿವೆ ಎಂದು ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ, ಗ್ರಾಮೀಣ ಬಿಜೆಪಿ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಡಾ. ಸೋನಾಲಿ ಸರ್ನೋಬತ್ ಟೀಕಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಖಾನಾಪುರ ಕ್ಷೇತ್ರದಲ್ಲಿ ಯಾವುದೇ ಕೆಲಸ ಮಾಡದ ಕಾಂಗ್ರೆಸ್ ಶಾಸಕರು ಹಾಥ್ ಸೇ ಹಾಥ್ ಜೋಡೋ ಎನ್ನುತ್ತ ಮನೆ ಮನೆಗೆ ಕಾಂಗ್ರೆಸ್ ಎಂದು ಅಭಿಯಾನ ಮಾಡುತ್ತಿದ್ದಾರೆ. ಕಾಂಗ್ರೆಸ್ ಮುಖಂಡರು ಎಷ್ಟೇ ದೂರ ಭಾರತ್ ಜೋಡೋ ಪಾದಯಾತ್ರೆ ಮಾಡಿದರೂ ಬೆಳೆದಿದ್ದು ರಾಹುಲ್ ಗಾಂಧಿಯವರ ಗಡ್ಡ ಮಾತ್ರವೇ ಹೊರೆತು ಬೇರೆ ಏನೂ ಪ್ರಯೋಜನ ಆಗಿಲ್ಲ. ಅಂತದ್ದರಲ್ಲಿ ಈಗ ಇಲ್ಲಿ ಯಾತ್ರೆ ಮಾಡಿದರೆ ಆಗುವುದೇನಿದೆ? ಜನರ ಸಂಕಷ್ಟಕ್ಕೆ ಸ್ಪಂದಿಸದವರು ಯಾವ ಯಾತ್ರೆ ಮಾಡಿದರೇನು ಎಂದು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ನವರು ತಮ್ಮ ಚಿಹ್ನೆಯಲ್ಲಿರುವ ಹಸ್ತದ ರೇಖೆಗಳನ್ನು ಬದಲಾಯಿಸಿದ್ದಾರೆ. ಇವರ ಹಣಬರಹವೇ ಸರಿ ಇಲ್ಲ. ಅಂದಾಗ ಹಸ್ತದ ರೇಖೆ ಬದಲಿಸಿ ಏನು ಪ್ರಯೋಜನ? ಇದನ್ನೆಲ್ಲ ಬಿಟ್ಟು ಜನರ ಕೆಲಸ ಮಾಡಿದ್ದರೆ ಇವರ ಹಣೆಬರಹ ಸ್ವಲ್ಪವಾದರೂ ಬದಲಾಗುತ್ತಿತ್ತೇನೋ ಎಂದು ಅವರು ವ್ಯಂಗ್ಯವಾಡಿದ್ದಾರೆ.
ಖಾನಾಪುರ ಶಾಸಕರು ಎಷ್ಟು ಕೆಲಸ ಮಾಡಿದ್ದಾರೆ ಎಂದು ಜನರು ನೋಡಿದ್ದಾರೆ. ಕೋವಿಡ್ 19 ಮತ್ತು ಲೋಂಡಾ ಗ್ರಾಮದಲ್ಲಿ ಮಳೆಯಿಂದ ಜನರು ಸಂಕಷ್ಟಕ್ಕೀಡಾದಾಗ ಜನರಿಗೆ ಯಾರು ಸಹಾಯ ಮಾಡಿದ್ದಾರೆಂದು ಎಲ್ಲರಿಗೂ ಗೊತ್ತಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜನರೇ ಇದಕ್ಕೆಲ್ಲ ಉತ್ತರಿಸುತ್ತಾರೆ. ಕೇವಲ ತೋರಿಕೆಗೆ ಕೆಲಸ ಮಾಡುವುದಕ್ಕೂ, ನಿಜವಾಗಿ ಜನರ ಕಷ್ಟಕ್ಕೆ ಸ್ಪಂದಿಸುವುದಕ್ಕೂ ವ್ಯತ್ಯಸವಿದೆ. ಕಷ್ಟ ಕಾಲದಲ್ಲಿ ಜನರ ಹತ್ತಿರ ಬಾರದ ಶಾಸಕರನ್ನು ಜನರೇ ಈ ಬಾರಿ ದೂರ ಮಾಡುತ್ತಾರೆ ಎಂದು ಸೋನಾಲಿ ಸರ್ನೋಬತ್ ಹೇಳಿದ್ದಾರೆ.