ಗ್ರಾಮೀಣ ಬ್ಯಾಂಕು ಉಳ್ಳವರಿಗೂ ಬೇಕು… ಕೊಳ್ಳಲಿರುವವರಿಗೂ ಬೇಕು..
– ಊರಿನೆಲ್ಲರಿಗೂ ಬೇಕು.. ತಾ ಊರುಗೋಲಾಗಿ ಮುನ್ನಡೆಸಲು ಸರ್ವರನೂ..
ಜನ ಸಾಮಾನ್ಯರ ಅಭಿವೃದ್ಧಿ ಗಮನದಲ್ಲಿ ಇಟ್ಟುಕೊಂಡು ಕೇಂದ್ರ ಸರ್ಕಾರ 1975ರಲ್ಲಿ ಗ್ರಾಮೀಣ ಬ್ಯಾಂಕಿಂಗ್ ವ್ಯವಸ್ಥೆ ಆರಂಭಿಸಿತು.
ರಾಜ್ಯದ ಮಲಪ್ರಭಾ, ಬಿಜಾಪೂರ, ವರದಾ, ನೇತ್ರಾವತಿ ಗ್ರಾಮೀಣ ಬ್ಯಾಂಕುಗಳು ಒಗ್ಗೂಡಿಸಿ 2005 ಸೆಪ್ಟೆಂಬರ್ 12ರಂದು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಉದಯಗೊಂಡಿತು. ಈ ಬ್ಯಾಂಕ್ನಲ್ಲಿ ಕೇಂದ್ರ ಸರ್ಕಾರ (ಶೇ.50) ರಾಜ್ಯ ಸರ್ಕಾರ (ಶೇ.15) ಮತ್ತು ಕೆನರಾ ಬ್ಯಾಂಕ್ (ಶೇ.35)ಬಂಡವಾಳ ಹೊಂದಿರುವುದರಿಂದ ಈ ಬ್ಯಾಂಕ್ ಸಂಪೂರ್ಣ ಸರ್ಕಾರಿ ಸ್ವಾಮಿತ್ವಕ್ಕೆ ಸೇರಿದೆ. ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಪಟ್ಟಣ, ಅರೆ ಪಟ್ಟಣಗಳಷ್ಟೇ ಅಲ್ಲ ಗ್ರಾಮ ಕುಗ್ರಾಮಗಳಲ್ಲೂ ತನ್ನ ಶಾಖೆಗಳನ್ನು ತೆರೆದು ಬಡ, ಕಡು ಬಡವ, ಸಣ್ಣ-ಅತಿ ಸಣ್ಣ ರೈತರು, ಕರಕುಶಲಕರ್ಮಿಗಳು, ಕೃಷಿ ಕಾರ್ಮಿಕರು ಮುಂತಾದ ವರ್ಗಗಳನ್ನು ಸರಳ ಬ್ಯಾಂಕಿಂಗ್ ಸೇವೆಗಳ ಮೂಲಕ ತಲುಪಿ ಅವರೆಲ್ಲರ ಆರ್ಥಿಕ ಉನ್ನತಿಗೆ ಮಹತ್ತರ ಕೊಡುಗೆ ನೀಡುತ್ತಲಿದೆ.
ಧಾರವಾಡದಲ್ಲಿ ಭವ್ಯ ಪ್ರಧಾನ ಕಚೇರಿ ಹೊಂದಿರುವ ಬ್ಯಾಂಕ್ ವಿಜಯಪುರ, ಬಾಗಲಕೋಟ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಉತ್ತರ ಕನ್ನಡ, ಉಡುಪಿ ಹಾಗೂ ಮಂಗಳೂರು ಜಿಲ್ಲಾ ಕಾರ್ಯ ವ್ಯಾಪ್ತಿಯಲ್ಲಿ 9 ಜಿಲ್ಲೆಗಳ ಕಾರ್ಯಕ್ಷೇತ್ರ ಹೊಂದಿದೆ. ಇದೀಗ ಈ ಬ್ಯಾಂಕ್ 629 ಶಾಖೆಗಳೊಂದಿಗೆ 2000ಕ್ಕೂ ಹೆಚ್ಚು ಗ್ರಾಮಗಳಿಗೆ ರಚನಾತ್ಮಕ ಸೇವೆ ನೀಡುತ್ತಲಿದೆ. ಆಡಳಿತಾತ್ಮಕ ನಿಯಂತ್ರಣಕ್ಕಾಗಿ 10 ಪ್ರಾದೇಶಿಕ ಕಾರ್ಯಾಲಯಗಳನ್ನು ಹೊಂದಿದೆ.
ಕೇವಲ 9 ಜಿಲ್ಲೆಗಳ ಕಾರ್ಯ ವ್ಯಾಪ್ತಿಯಲ್ಲಿದ್ದರೂ ಬ್ಯಾಂಕ್ ವಹಿವಾಟು 31,500 ಕೋಟಿ ರೂ. ದಾಟಿದೆ. ಸುಮಾರು 17,300 ಕೋಟಿ ರೂ. ಠೇವಣಿ, 14,200 ಕೋಟಿ ರೂ. ಮುಂಗಡ ಮಟ್ಟ ತಲುಪಿರುವ ಬ್ಯಾಂಕ್ 1280 ಕೋಟಿ ರೂ. ನಿವ್ವಳ ಸಂಪತ್ತು (Net worth) ಹೊಂದಿದೆ. 85ಲಕ್ಷಕ್ಕೂ ಮಿಕ್ಕಿದ ಗ್ರಾಹಕ ಬಳಗ ಹೊಂದಿರುವ ಬ್ಯಾಂಕ್ ಜನಸಾಮಾನ್ಯರ ಬದುಕು ಪರಿವರ್ತನೆಯಲ್ಲಿ ತನ್ನದೇ ಆದ ರೀತಿಯಲ್ಲಿ ತೊಡಗಿಸಿಕೊಂಡು ಈ ಭಾಗದ ಮನೆ ಮಾತಾಗಿದೆ.
ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಹಲವು ವಿಶಿಷ್ಟ ಠೇವಣಿ, ಸಾಲ ಯೋಜನೆ ರೂಪಿಸಿ ಅನುಷ್ಠಾನಗೊಳಿಸಿದೆ. ಡಿಜಿಟಲ್ ಬ್ಯಾಂಕಿಂಗ್ ಅಳವಡಿಸಿಕೊಂಡ ರಾಷ್ಟ್ರದ ಕೆಲವೇ
ಕೆಲವು ಬ್ಯಾಂಕ್ಗಳಲ್ಲಿ ಇದೂ ಒಂದಾಗಿದೆ.