ಹುಬ್ಬಳ್ಳಿ: ಬೆಳಗಾವಿ ಬಿಜೆಪಿಯಲ್ಲಿ ಯಾವುದೇ ಭಿನ್ನಮತವಿಲ್ಲ. ಹಾಗಂತ ರಮೇಶ ಜಾರಕಿಹೊಳಿ ಎಲ್ಲಿಯೂ ಹೇಳಿಲ್ಲ. ಪ್ರತಿಯೊಬ್ಬರಿಗೂ ಒಂದು ಗುರಿ ನೀಡಿದ್ದು, ಅದರ ಸಾಕಾರಕ್ಕೆ ಎಲ್ಲರೂ ಪ್ರಯತ್ನಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಿನ್ನಮತದ ಕುರಿತ ಎಲ್ಲಿಯೂ ಪ್ರಸ್ತಾಪ ಮಾಡಿಲ್ಲ. ಇದು ಕೇವಲ ಕಲ್ಪಿತವಷ್ಟೇ. ಪ್ರತಿಯೊಬ್ಬರಿಗೂ ಒಂದೊಂದು ಗುರಿ ನೀಡಲಾಗಿದೆ. ಪಕ್ಷದ ಸಂಘಟನೆ ಎಲ್ಲರೂ ಒತ್ತು ನೀಡಬೇಕಾಗಿದೆ. ಪಕ್ಷದ ಏಳ್ಗೆಗಾಗಿ ಎಲ್ಲರೂ ಶ್ರಮಿಸಬೇಕು. ಕೇಂದ್ರ ಹಾಗೂ ರಾಜ್ಯ ಸರಕಾರದ ಯೋಜನೆಗಳನ್ನು ಮನೆ ಮನಕ್ಕೆ ಮುಟ್ಟಿಸುವ ಕೆಲಸ ನಡೆಯುತ್ತದೆ. ಇನ್ನೊಂದೆಡೆ ಪಕ್ಷ ಸಂಘಟನೆ ನಡೆಯುತ್ತಿದೆ ಎಂದರು.ಡಿ.ಕೆ.ಶಿವಕುಮಾರ್ ಅವರಿಗೆ ಬಿಜೆಪಿ ಸಿಂಹಸ್ವಪ್ನವಾಗಿದೆ. ಹೀಗಾಗಿ ಬಿಜೆಪಿ ಬಗ್ಗೆ ಅಗಾಗ ಮಾತನಾಡುತ್ತಿರುತ್ತಾರೆ ಎಂದು ಲೇವಡಿ ಮಾಡಿದರು.