Breaking News
Home / ಜಿಲ್ಲೆ / ಹಾವೇರಿ / ಹಾವೇರಿ: ಸಾಹಿತ್ಯ ಜಾತ್ರೆಯಲ್ಲಿ ವಸ್ತ್ರ ವೈಭವ, ಕೈಮಗ್ಗದ ವಸ್ತ್ರಗಳಿಗೆ ಬೇಡಿಕೆ

ಹಾವೇರಿ: ಸಾಹಿತ್ಯ ಜಾತ್ರೆಯಲ್ಲಿ ವಸ್ತ್ರ ವೈಭವ, ಕೈಮಗ್ಗದ ವಸ್ತ್ರಗಳಿಗೆ ಬೇಡಿಕೆ

Spread the love

ಹಾವೇರಿ: ಇಳಕಲ್ ಸೀರೆ, ಕೈಮಗ್ಗದ ವಸ್ತ್ರಗಳು, ಕನ್ನಡ ಅಂಗಿಗಳು, ಖಾದಿ ಬಟ್ಟೆಗಳಿಗೆ ಭಾರಿ ಬೇಡಿಕೆ ವ್ಯಕ್ತವಾಯಿತು. ಸಾಹಿತ್ಯ ಜಾತ್ರೆಯ ಕೊನೆಯ ದಿನ ಭಾನುವಾರ ವಸ್ತ್ರ ವೈಭೋಗ ಗರಿಗೆದರಿತ್ತು.

ನಗರದ ಹೊರವಲಯದಲ್ಲಿ ಆಯೋಜಿಸಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆವರಣದ ವಾಣಿಜ್ಯ ಮಳಿಗೆಗಳಲ್ಲಿ ಬಟ್ಟೆ ಮಳಿಗೆಗಳದ್ದೇ ಕಾರುಬಾರು.

 

ಸೀರೆಗೆ ಮುಗಿಬಿದ್ದ ನಾರಿಯರು: ನೇಕಾರರು ನೇಯ್ದ ಇಳಕಲ್‌ ಸೀರೆಗಳನ್ನು ಕೊಳ್ಳಲು ನೀರೆಯರು ಮುಗಿಬಿದ್ದರು. ಕಸೂತಿ, ಚದುರಂಗ, ರಾಗಾವಳಿ, ಕರಿಚಂದ್ರಕಾಳಿ, ಪ್ಲೇನ್‌ ಮತ್ತು ಚೆಕ್ಸ್‌ ಸೀರೆಗಳು ಕಲಾತ್ಮಕ ಕಸೂತಿಯಿಂದ ಮನಸೂರೆಗೊಂಡವು. ಉತ್ತರ ಕರ್ನಾಟಕದ ಸಂಸ್ಕೃತಿ ಬಿಂಬಿಸುವ ಇಳಕಲ್‌ ಸೀರೆಗಳ ಮಾರಾಟದ ಭರಾಟೆಯನ್ನು ನೋಡಿದ ಯುವಕರು ‘ಇಳಕಲ್‌ ಸೀರೆ ಉಟ್ಕೊಂಡು’ ಹಾಡನ್ನು ಗುನುಗುತ್ತಿದ್ದರು.

ಸೀರೆಗಳ ಸೆರಗಿನ ತುದಿಯಲ್ಲಿ ಹೆಣಿಗೆ, ಕೋಟಿಕಂಬ್ಳಿ, ಟೋಪಿ ತೆನೆ, ಜೋಳದ ತೆನೆ, ರಂಪ (ಗಿರಿಶ್ರೇಣಿ) ಇತ್ಯಾದಿಗಳ ಹೆಣಿಗೆ ವಿನ್ಯಾಸಗಳು ಮಹಿಳೆಯರನ್ನು ಆಕರ್ಷಿಸಿದವು. ‘ಬಣ್ಣದ ಪಟ್ಟೆಗಳು’, ‘ಆಯತಾಕೃತಿ’ ಹಾಗೂ ‘ಚೌಕಳಿ ಆಕಾರದ ವಿನ್ಯಾಸಗಳು ಸಾಂಪ್ರದಾಯಿಕ ಮಹತ್ವವನ್ನು ಸಾರಿದವು.

₹1 ಲಕ್ಷ ವ್ಯಾಪಾರ: ‘ಸಾಹಿತ್ಯ ಸಮ್ಮೇಳನದ ಎರಡು ದಿನಗಳಲ್ಲಿ ₹1 ಲಕ್ಷ ಮೌಲ್ಯದ ಇಳಕಲ್‌ ಸೀರೆಗಳನ್ನು ಮಾರಾಟ ಮಾಡಿದ್ದೇವೆ. ನಮ್ಮಲ್ಲಿ ₹650ರಿಂದ ₹12 ಸಾವಿರದವರೆಗಿನ ದರದ ಸೀರೆಗಳಿವೆ. ಸಮ್ಮೇಳನಕ್ಕೆ ₹5 ಲಕ್ಷ ಮೌಲ್ಯದ ಸೀರೆಗಳನ್ನು ತಂದಿದ್ದೇನೆ. ಕೊನೆಯ ದಿನ ₹1 ಲಕ್ಷ ವ್ಯಾಪಾರವಾಗುವ ನಿರೀಕ್ಷೆಯಿದೆ’ ಎಂದು ಪೂಜಾ ಹ್ಯಾಂಡ್‌ಲೂಮ್ಸ್‌ನ ವ್ಯಾಪಾರಿ ಭರತೇಶ ಒಂದಕುದರಿ ತಿಳಿಸಿದರು.

ಅಸ್ಸಾಂ ಸೀರೆಗಳು: ‘ವಾಣಿಜ್ಯ ಮಳಿಗೆಗಳಲ್ಲಿ ಅಸ್ಸಾಂ ಸೀರೆಗಳು ಗ್ರಾಹಕರ ಗಮನ ಸೆಳೆಯುತ್ತಿವೆ. ಮುಂಗಾರಿ, ಮಟ್ಕಾ ಸಿಲ್ಕ್‌, ಟಸ್ಸರ್‌, ಮಲ್‌ಬರಿ ಹೆಸರಿನ ಸೀರೆಗಳನ್ನು ತಂದಿದ್ದೇನೆ. ₹3500 ಮೌಲ್ಯದ ಸೀರೆಯನ್ನು ₹2800ಕ್ಕೆ ರಿಯಾಯಿತಿ ದರದಲ್ಲಿ ಮಾರುತ್ತಿದ್ದೇನೆ’ ಎಂದು ವ್ಯಾಪಾರಿ ಬ್ರಿಜೇಶ್‌ ಯಾದವ್‌ ತಿಳಿಸಿದರು.


Spread the love

About Laxminews 24x7

Check Also

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಡಿ ಕೆ ಶಿವಕುಮಾರ್ ಶಾಸಕರಿಗೆ ನೀಡಿರುವ ಎಚ್ಚರಿಕೆ ಕುರಿತು ಮಾತನಾಡುವುದಿಲ್ಲ ಎಂದಿದ್ದಾರೆ.

Spread the love ಹಾವೇರಿ : ಕಾಂಗ್ರೆಸ್ ಅಧ್ಯಕ್ಷ ಡಿ ಕೆ ಶಿವಕುಮಾರ್ ಪಕ್ಷದ ವಿಚಾರದಲ್ಲಿ, ಆಂತರಿಕ ವಿಚಾರದಲ್ಲಿ ಹೇಳಿಕೆ ನೀಡದಂತೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ