ವಿಜಯಪುರ: ಒಂದು ವಾರದೊಳಗೆ ನಮ್ಮ ಬೇಡಿಕೆಗಳನ್ನು ಈಡೇರಿಸದೆ ಇದ್ದರೆ ನಮ್ಮ ಮಾತೃ ಭೂಮಿ ಕರ್ನಾಟಕಕ್ಕೆ ಸೇರಲು ಅನುಮತಿ ನೀಡಿ ಎಂದು ಮರಾಠಿ ನೆಲದಲ್ಲಿರುವ ಗಡಿನಾಡ ಕನ್ನಡಿಗರು ಮಹಾರಾಷ್ಟ್ರ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಜತ್ ತಾಲೂಕಿನ ಉಮದಿ ಪಟ್ಟಣದ ಮಲಕಾರ ಸಿದ್ಧ ದೇವಸ್ಥಾನದಲ್ಲಿ ಶುಕ್ರವಾರ ರಾತ್ರಿ ಸಭೆ ಸೇರಿದ್ದ ಗಡಿನಾಡ ಕನ್ನಡಿಗರು, ಮಹಾರಾಷ್ಟ್ರ ಸರಕಾರಕ್ಕೆ ಒಂದು ವಾರದ ಗಡುವು ನೀಡಿದ್ದಾರೆ. ‘ನೀರು ಕೊಡಿ, ಇಲ್ಲವೇ ನಮ್ಮನ್ನು ಕರ್ನಾಟಕ ಸೇರಲು ಬಿಡಿ’ ಎಂದು ಎಚ್ಚರಿಕೆ ನೀಡಿದ್ದಾರೆ.
ಮಹಾಜನ ಆಯೋಗದ ವರದಿ ಪ್ರಕಾರ ಜತ್, ಮಹಾರಾಷ್ಟ್ರದಲ್ಲಿರುವ ಅಕ್ಕಲಕೋಟ, ಲಾತೂರ, ಸೋಲಾಪುರ, ಕೊಲ್ಲಾಪುರ ಸೇರಿದಂತೆ ಕನ್ನಡಿಗರೇ ವಾಸ ಇರುವ ಪ್ರದೇಶ ಕರ್ನಾಟಕಕ್ಕೆ ಸೇರುವುದು ಖಚಿತ. ಹೀಗಾಗಿ ಈ ಭಾಗದಲ್ಲಿ ಅಭಿವೃದ್ಧಿ ಮಾಡಿ ದರೂ ವ್ಯರ್ಥ ಎಂದರಿತ ಮಹಾರಾಷ್ಟ್ರ ಸರಕಾರ ತನ್ನ ನೆಲದಲ್ಲಿರುವ ಕನ್ನಡದ ಗ್ರಾಮಗಳ ಅಭಿವೃದ್ಧಿ ಮಾಡು ತ್ತಿಲ್ಲ ಎಂಬುದು ಗಡಿನಾಡ ಕನ್ನಡಿಗರ ಆರೋಪ.
ಸಾಂಗ್ಲಿ ಜಿಲ್ಲೆಯ ಜತ್ ತಾಲೂಕಿನ 42 ಹಳ್ಳಿಗಳಿಗೆ ನೀರಾವರಿ ಕಲ್ಪಿಸುವುದಕ್ಕಾಗಿ ಮಹಿಷಾಳ ಏತ ನೀರಾವರಿ ಯೋಜನೆ ಅನುಷ್ಠಾನಕ್ಕೆ ಹೋರಾಟ ನಡೆಯುತ್ತಲೇ ಇದೆ. ಇದಕ್ಕಾಗಿ ಮಹಿಷಾಳ ಪಾಣಿ ಸಂಘರ್ಷ ಪರಿಷತ್ ಹೆಸರಿನಲ್ಲಿ ಸಂಘಟನೆ ಸ್ಥಾಪಿಸಿ ಹೋರಾಟ ನಡೆಸುತ್ತಲೇ ಇದ್ದಾರೆ. ಅಲ್ಲದೆ ಗಡಿ ಭಾಗದಲ್ಲಿರುವ ಕನ್ನಡದ ಹಳ್ಳಿಗಳಿಗೆ ಕುಡಿಯುವ ನೀರು, ಆರೋಗ್ಯ, ಕನ್ನಡ ಶಾಲೆಗಳ ಬಲವರ್ಧನೆಗೆ ಅಗತ್ಯ ಅನುದಾನ, ರಸ್ತೆ, ಸಾರಿಗೆ, ವಿದ್ಯುತ್ ಸೇರಿದಂತೆ ಅಗತ್ಯ ಮೂಲಸೌಲಭ್ಯ ಕಲ್ಪಿಸುವಂತೆ ಹೋರಾಟಗಳು ನಡೆಯುತ್ತಲೇ ಇವೆ. ಆದರೂ 4 ದಶಕಗಳಲ್ಲಿ ಗಡಿನಾಡ ಕನ್ನಡಿಗರ ಭಾವನೆಗೆ ಮಹಾರಾಷ್ಟ್ರ ಸರಕಾರ ಸ್ಪಂದಿಸಿಲ್ಲ. ನೀಡಿದ ಭರವಸೆಗಳು ಈಡೇರಿಲ್ಲ.
ಹೀಗಾಗಿ ದಶಕದ ಹಿಂದೆ 42 ಗ್ರಾಮ ಪಂಚಾಯತ್ಗಳು ಅಂಗೀಕರಿಸಿದ ನಿರ್ಣಯದಂತೆ ಕರ್ನಾಟಕ ಸೇರಲು ಅನುಮತಿ ನೀಡಿ ಎಂದು ಮಹಾರಾಷ್ಟ್ರ ಸರಕಾರವನ್ನು ಆಗ್ರಹಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ.
ಈಗ ಮಹಾರಾಷ್ಟ್ರದ ರಾಜಕಾರಣಿಗಳು ನೀಡಿರುವ ಕನ್ನಡ ವಿರೋಧಿ ಹೇಳಿಕೆಗಳು, ಕರ್ನಾಟಕದ ಸಿಎಂ ಬಸವರಾಜ ಬೊಮ್ಮಾಯಿ ಗಡಿನಾಡ ಕನ್ನಡಿಗರ ಕುರಿತು ಆಡಿರುವ ಆತ್ಮವಿಶ್ವಾಸದ ಮಾತುಗಳು ಮಹಾರಾಷ್ಟ್ರದ ಕನ್ನಡ ಹಳ್ಳಿಗಳಲ್ಲಿ ಸಂಚಲನ ಮೂಡಿಸಿದೆ.
ಚಳಿವಳಿ ರೂಪಿಸಲು ಸಿದ್ಧತೆ
ಮರಾಠಿ ನೆಲದಲ್ಲಿರುವ ಕನ್ನಡದ ಗ್ರಾಮಗಳ ಕನ್ನಡಿಗರಲ್ಲಿ ದಿನೇದಿನೆ ಹೋರಾಟದ ಕಿಚ್ಚು ಹೆಚ್ಚುತ್ತಿದೆ. ಉಮದಿ ನೀರಾವರಿ ಹೋರಾಟ ಸಮಿತಿ ಸಭೆಯ ಬೆನ್ನಲ್ಲೇ ತಿಕ್ಕುಂಡಿ ಗ್ರಾಮದಲ್ಲಿ ಬೈಕ್ ರ್ಯಾಲಿ ನಡೆಸಿರುವ ಕನ್ನಡಿ ಗರು, ‘ಜೈ ಕರ್ನಾಟಕ, ಜೈ ಕನ್ನಡಿಗ’ ಎಂದು ಘೋಷಣೆ ಕೂಗಿದ್ದಾರೆ. ಇದರೊಂದಿಗೆ ಮಹಾರಾಷ್ಟ್ರ ನಾಯಕರ ಸಿನಿಕ ಮಾತುಗಳಿಗೆ ತಿರುಗೇಟು ನೀಡಿರುವ ಗಡಿ ನಾಡ ಕನ್ನಡಿಗರು ‘ಕರ್ನಾಟಕ ಸೇರಲು ಅವಕಾಶ ನೀಡಿ’ ಎಂದು ಆಗ್ರಹಿಸುವ ಚಳವಳಿ ರೂಪಿಸಲು ನಿರ್ಧರಿಸಿದ್ದಾರೆ.