ಚಿಕ್ಕಮಗಳೂರು: ರಸ್ತೆ ತಿರುವಿನಲ್ಲಿ ತಡೆಗೋಡೆಗಳಿಲ್ಲದ ಕಾರಣ ಚಾಲಕನ ನಿಯಂತ್ರಣ ತಪ್ಪಿ ಶಿಫ್ಟ್ ಕಾರೊಂದು ರಸ್ತೆ ಬದಿಯ ಹಳ್ಳಕ್ಕೆ ಪಲ್ಟಿಯಾಗಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಜಾವಳಿ ಸಮೀಪದ ಮೂಲೆಮನೆ ಗ್ರಾಮದಲ್ಲಿ ನಡೆದಿದೆ.
ಶಿಫ್ಟ್ ಕಾರಿನಲ್ಲಿ ನಾಲ್ವರು ಬೆಂಗಳೂರಿನಿಂದ ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ಹೋಗುತ್ತಿದ್ದರು. ಬೆಳಗಿನ ಜಾವ ಸುಮಾರು 4 ಗಂಟೆಗೆ ಮೂಲೆಮನೆ ಗ್ರಾಮದ ಬಳಿ ರಸ್ತೆ ತಿರುವಿನಲ್ಲಿ ಕಾರು ಹಳ್ಳಕ್ಕೆ ಪಲ್ಟಿಯಾಗಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.ವಾರಕ್ಕೊಂದು ಅಪಘಾತ: ಈ ಮಾರ್ಗದಲ್ಲಿ ಪ್ರತಿನಿತ್ಯ ನೂರಾರು ಪ್ರವಾಸಿ ವಾಹನಗಳು ಓಡಾಡುತ್ತವೆ. ಈ ತಿರುವಿನಲ್ಲಿ ವಾರಕ್ಕೊಂದು ಅಪಘಾತಗಳು ನಡೆಯುತ್ತಿವೆ. ಆದರೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ.
ಶಿಫ್ಟ್ ಕಾರಿನ ಹಿಂದೆ ಸಂಚರಿಸುತ್ತಿದ್ದ ವಾಹನ ಸವಾರರು ಹಾಗೂ ಸ್ಥಳೀಯರು ಕಾರಿನಲ್ಲಿದ್ದವರನ್ನ ರಕ್ಷಿಸಿದ್ದಾರೆ. ರಸ್ತೆ ಬದಿಯ ಹಳ್ಳಕ್ಕೆ ತಡೆಗೋಡೆ ಇಲ್ಲದಿರುವುದೇ ಈ ಅಪಘಾತಕ್ಕೆ ಕಾರಣ ಎಂದು ಸ್ಥಳೀಯರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಅಧಿಕಾರಿಗಳ ಗಮನಕ್ಕೆ ತಂದರೂ ಉಪಯೋಗವಿಲ್ಲ ಎಂದು ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ಸ್ಥಳೀಯರು ಕಿಡಿ ಕಾರಿದ್ದಾರೆ. ಈಗ ಸಣ್ಣ-ಪುಟ್ಟ ಅಪಘಾತಗಳಾಗಿವೆ. ನಾಳೆ ದೊಡ್ಡ ಅನಾಹುತವಾದರೆ ಅದಕ್ಕೆ ಜವಾಬ್ದಾರಿ ಯಾರೆಂದು ಸರ್ಕಾರಕ್ಕೆ ಪ್ರಶ್ನಿಸಿದ್ದಾರೆ.