ಪಾಟ್ನಾ: ಕೆಟ್ಟ ಮಕ್ಕಳು ಇರುತ್ತಾರೆ, ಆದರೆ ಕೆಟ್ಟ ಅಮ್ಮ ಇರುವುದಿಲ್ಲ ಎನ್ನುವುದು ತೀರಾ ಹಿಂದಿನಿಂದಲೂ ಚಾಲ್ತಿಯಲ್ಲಿ ಬಂದಿರುವ ನಾಣ್ಣುಡಿ,
ಆದರೆ ಇತ್ತೀಚಿನ ದಿನಗಳಲ್ಲಿ ತನ್ನ ಕರುಳಕುಡಿಯನ್ನೇ ಸಾಯಿಸುವುದು, ಮಾರಾಟ ಮಾಡುವುದು ಇತ್ಯಾದಿ ಸುದ್ದಿಗಳು ವರದಿಯಾಗುತ್ತಲೇ ಇವೆ. ಅಂಥದ್ದೇ ಒಂದು ಭಯಾನಕ ಘಟನೆ ಪಾಟ್ನಾದ ಹಸನ್ಪುರ್ ಖಂಡಾ ಪ್ರದೇಶದಲ್ಲಿ ನಡೆದಿದೆ.
23 ವರ್ಷದ ಧರ್ಮಶೀಲಾ ದೇವಿ ಇದಾಗಲೇ ಮೂರು ಮದುವೆಯಾಗಿದ್ದಾಳೆ. ನಾಲ್ಕು ವರ್ಷದಲ್ಲಿ ಮೂರು ಮದುವೆಯಾಗಿ ನಾಲ್ಕನೇ ಮದುವೆಯಾಗಲು ಹೊರಟಿದ್ದಳು. ಆದರೆ ಆಕೆಯ ನಾಲ್ಕು ವರ್ಷದ ಕಂದಮ್ಮನಿಂದಾಗಿ ತನಗೆ ಮತ್ತೆ ಮದುವೆಯಾಗುವುದು ಕಷ್ಟ ಎಂದು ಎನ್ನಿಸಿದೆ. ಇದರಿಂದ ಸಿಟ್ಟಿಗೆದ್ದಿರುವ ಈ ‘ಮಹಾತಾಯಿ’ ಆತನನ್ನೇ ನೀರಿನಲ್ಲಿ ಮುಳುಗಿಸಿ ಕೊಲೆ ಮಾಡಿದ್ದಾಳೆ!ಸಜನ್ ಕುಮಾರ್ ಎಂಬ ಬಾಲಕ ತಾಯಿಯ ಕೃತ್ಯಕ್ಕೆ ಬಲಿಯಾಗಿದ್ದಾನೆ. ಈತನಿಗೆ ಸರಿಯಾಗಿ ಮಾತನಾಡಲು ಬರುತ್ತಿರಲಿಲ್ಲ. ಸರಿಯಾಗಿ ಕಿವಿ ಕೂಡ ಕೇಳಿಸುತ್ತಿರಲಿಲ್ಲ.
ಧರ್ಮಶೀಲಾ ದೇವಿ ಮತ್ತು ಆಕೆಯ ಮೊದಲ ಪತಿ ಅರುಣ್ ಚೌಧರಿ ಮಗ ಸಜನ್ ಕುಮಾರ್. ಮದುವೆಯಾದ ಒಂದು ವರ್ಷದ ನಂತರ ಈಕೆ, ಪತಿಯನ್ನು ಬಿಟ್ಟು ಮಗನ ಕರೆದುಕೊಂಡು ಹೋಗಿದ್ದಳು. ಸ್ವಲ್ಪ ತಿಂಗಳಿನಲ್ಲಿಯೇ ಎರಡನೇ ಮದುವೆಯಾದಳು. ಆದರೆ 2ನೇ ಪತಿ ಅನಾರೋಗ್ಯದ ನಿಮಿತ್ತ ಮೃತಪಟ್ಟರು.
ಧರ್ಮಶೀಲಾ ದೇವಿ ಪಾಟ್ನಾದ ಮುಸ್ತಾಫಾಪುರ ನಿವಾಸಿ ಮಹೇಶ್ ಚೌಧರಿ ಎಂಬುವವರ ಜತೆ ಮೂರನೇ ಬಾರಿ ಮದುವೆಯಾದಳು. ಎರಡು ತಿಂಗಳ ಹಿಂದೆ ಮಹೇಶ್ ರಸ್ತೆ ಅಪಘಾತದಲ್ಲಿ ಮೃತಪಟ್ಟಿರು. ಹೀಗಾಗಿ ಆರೋಪಿ ದೇವಿ ಮತ್ತೆ ಮದುವೆಯಾಗಲು ಬಯಸಿದ್ದಳು.
ಆದರೆ ಅವಳಿಗೆ ಈ ಮಗ ಹೊರೆ ಎನಿಸತೊಡಗಿದ. ತನ್ನ ಸುಖಮಯ ಜೀವನಕ್ಕೆ ಈತ ಅಡ್ಡಿಯಾಗುತ್ತಿದ್ದಾನೆ ಎನ್ನಿಸಿದೆ. ಆದ್ದರಿಂದ ನೀರಿನಲ್ಲಿ ಮುಳುಗಿಸಿ ಕೊಲೆ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಗ್ರಾಮದ ಕೆಲ ಬಾಲಕರು ಮೃತದೇಹವನ್ನು ನೀರಿನಲ್ಲಿ ನೋಡಿ ಪೊಲೀಸರಿಗೆ ತಿಳಿಸಿದ್ದಾರೆ. ತನಿಖೆ ವೇಳೆ ವಿಷಯ ಬಹಿರಂಗಗೊಂಡಿದೆ. ಧರ್ಮಶೀಲಾ ದೇವಿ ತಪ್ಪೊಪ್ಪಿಕೊಂಡಿದ್ದು, ಮೊಕದ್ದಮೆ ದಾಖಲು ಮಾಡಿರುವುದಾಗಿ ಪೊಲೀಸರು ಹೇಳಿದ್ದಾರೆ.