ಮಡಿಕೇರಿ: ತನ್ನ ತಂದೆ ಪ್ರತಿನಿತ್ಯ ಕೊಡುತ್ತಿದ್ದ ಹಿಂಸೆಯನ್ನು ಸಹಿಸಿಕೊಳ್ಳಲಾರದೆ 8 ವರ್ಷದ ಬಾಲಕಿಯೊಬ್ಬಳು ನನ್ನನ್ನು ಅನಾಥ ಆಶ್ರಮಕ್ಕೆ ಸೇರಿಸುವಂತೆ ಗ್ರಾಮಸ್ಥರನ್ನು ಕೇಳಿಕೊಂಡಿರುವ ಹೃದವಿದ್ರಾವಕ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಶನಿವಾರಸಂತೆಯಲ್ಲಿ ನಡೆದಿದೆ.
ಮಗುವಿನ ಕಷ್ಟವನ್ನು ಮನಗಂಡ ಸ್ಥಳೀಯರು ಮಕ್ಕಳ ಸಹಾಯವಾಣಿಗೆ ಕರೆಮಾಡಿ ಬಾಲಕಿಯನ್ನು ರಕ್ಷಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಪಾಪಿ ತಂದೆ ತನ್ನ 8 ವರ್ಷದ ಮಗಳಿಂದ ಕಷ್ಟವಾದ ಕೆಲಸಗಳನ್ನು ಮಾಡಿಸುತ್ತಿದ್ದ. ಒಂದು ವೇಳೆ ಕೆಲಸಗಳನ್ನು ಮಾಡದಿದ್ದರೆ ದಿನನಿತ್ಯ ಆಕೆಗೆ ಥಳಿಸುತ್ತಿದ್ದ ಎಂಬ ಆರೋಪ ಕೇಳಿಬಂದಿದೆ.
9 ವರ್ಷಗಳ ಹಿಂದೆ ವಿವಾಹವಾಗಿದ್ದ ಚಂದ್ರಶೇಖರ್ಗೆ ಇಬ್ಬರು ಹೆಣ್ಣು ಮಕ್ಕಳಿದ್ದರು. ಕುಡಿತಕ್ಕೆ ದಾಸನಾಗಿದ್ದ ಚಂದ್ರಶೇಖರ್ನಿಂದ ನೊಂದಿದ್ದ ಹೆಂಡತಿ ಮಕ್ಕಳೊಂದಿಗೆ ತವರು ಮನೆಯನ್ನು ಸೇರಿದ್ದರು. ಇಬ್ಬರು ಮಕ್ಕಳಲ್ಲಿ ಒಬ್ಬಳನ್ನು ಕರೆತಂದು ಮನೆಯಲ್ಲೇ ಇಟ್ಟುಕೊಂಡಿದ್ದ ತಂದೆ, ವಯಸ್ಸಿಗೆ ಮೀರಿದ ಕೆಲಸವನ್ನು ಮಾಡಿಸುತ್ತಿದ್ದನು. ಒಂದು ವೇಳೆ ಕೆಲಸ ಮಾಡದಿದ್ದರೆ ದೈಹಿಕ ಹಿಂಸೆ ನೀಡುತ್ತಿದ್ದನು ಎನ್ನಲಾಗಿದೆ.
ಬಾಲಕಿಯ ಸಂಕಷ್ಟ ಅರಿತ ಸ್ಥಳೀಯರು ಮಕ್ಕಳ ಸಹಾಯವಾಣಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಮಕ್ಕಳ ರಕ್ಷಣಾ ಸಿಬ್ಬಂದಿ ಭೇಟಿ ನೀಡಿದ್ದಾರೆ. ಸ್ಥಳಕ್ಕೆ ಶನಿವಾರಸಂತೆ ಗ್ರಾಮಾಂತರ ಠಾಣೆಯ ಪೊಲೀಸರು ದೌಡಾಯಿಸಿದ್ದು ಪರಿಶೀಲನೆ ನಡೆಸಿದ್ದಾರೆ.