ಬೆಂಗಳೂರು: ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರವಾಗಿ ಹಲವಾರು ಸುದ್ದಿಗಳು ಓಡಾಡುತ್ತಿದ್ದು ಈ ನಡುವೆ ಎರಡು ಚುನಾವಣೆಗಳನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಬಿಜೆಪಿ ಹೈಕಮಾಂಡ್ ಸಿಎಂ ಬದಲಾವಣೆಯ ಲೆಕ್ಕಾಚಾರ ನಡೆಸುತ್ತಿದೆ ಎಂದು ಹೇಳಲಾಗಿದೆ. 2023ರ ವಿಧಾನಸಭೆ ಚುನಾವಣೆ ಮತ್ತು 2024 ರ ಲೋಕಸಭಾ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು ಈ ಬದಲಾವಣೆ ನಡೆಯಲಿದೆ ಎಂದು ತಿಳಿದುಬಂದಿದೆ.
ಯಡಿಯೂರಪ್ಪ ಸ್ಥಾನಕ್ಕೆ ಯಾರು ಎಂಬುದನ್ನು ಖುದ್ದು ಪ್ರಧಾನಿ ನರೇಂದ್ರ ಮೋದಿ ಸೂಚಿಸಲಿದ್ದಾರೆ ಎಂದು ಹೇಳಲಾಗಿದೆ. ಹೊಸ ಸಿಎಂ ಯಾರು ಎಂದು ನಾನೇ ಸೂಚಿಸುತ್ತೇನೆ ಎಂದು ಕೇಂದ್ರೀಯ ಬಿಜೆಪಿಗೆ ಮೋದಿ ತಿಳಿಸಿದ್ದಾರಂತೆ. ಜೊತೆಗೆ, ರಾಜ್ಯದಲ್ಲಿ ಕೇಸರಿ ಪಕ್ಷದ ಬೆಳವಣಿಗೆ ವಿಚಾರವನ್ನ ಸಂಪೂರ್ಣವಾಗಿ ನಿಭಾಯಿಸಲು ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಸಜ್ಜಾಗಿದ್ದಾರೆ.
ಹಾಗಾಗಿ, ಯಡಿಯೂರಪ್ಪ ಸ್ಥಾನಕ್ಕೆ ಫೈರ್ ಬ್ರಾಂಡ್ ನಾಯಕನಿಗಾಗಿ ತಲಾಶ್ ನಡೆದಿದೆ. ಫೈರ್ ಬ್ರಾಂಡ್ ನಾಯಕತ್ವದ ಮೂಲಕ ಎರಡೂ ಮಹಾ ಚುನಾವಣೆಗಳನ್ನು ಎದುರಿಸುವ ಲೆಕ್ಕಾಚಾರದಲ್ಲಿರುವ ಹೈಕಮಾಂಡ್ ಹಿಂದೂತ್ವ ಹಾಗೂ ನೇರಾ ನೇರ ವ್ಯಕ್ತಿತ್ವದ ಉತ್ತರ ಕರ್ನಾಟಕದ ಬಿಜೆಪಿ ಶಾಸಕರ ಮೇಲೆ ದೃಷ್ಟಿ ಇಟ್ಟಿದೆ ಎಂಬ ಸುದ್ದಿಯೂ ಹರಿದಾಡುತ್ತಿದೆ.