ಗದಗ: ಶಾಲಾ ಆವರಣದಲ್ಲಿ ಭೂ ಕುಸಿತವಾಗಿದ್ದು, ಭಾರೀ ಅನಾಹುತವೊಂದು ತಪ್ಪಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ನಗರದ ವೀರನಾರಾಯಣ ದೇವಸ್ಥಾನದ ಬಳಿಯ ಸರ್ಕಾರಿ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆ ನಂಬರ್ 02 ಆವರಣದಲ್ಲಿ ಭೂ ಕುಸಿತವಾಗಿದೆ. ಶಾಲೆಗಳು ರಜೆ ಇರುವುದರಿಂದ ಭಾರೀ ಅನಾಹುತ ತಪ್ಪಿದೆ. ಸುಮಾರು 30 ಅಡಿ ಭೂ ಕುಸಿತವಾಗಿದೆ. ಶಿಕ್ಷಕರು ಹಾಗೂ ಸ್ಥಳೀಯರು ಶಾಲೆಗೆ ಬಂದಾಗ ಈ ಘಟನೆ ನೋಡಿ ಆತಂಕಗೊಂಡಿದ್ದಾರೆ
ವೀರನಾರಾಯಣ ದೇವಸ್ಥಾನ ಬಳಿ ಅಲ್ಲಲ್ಲಿ ಆಗಾಗ ಭೂ ಕುಸಿತವಾಗುತ್ತಿದೆ. ಇವು ಧಾನ್ಯಗಳನ್ನು ಸಂಗ್ರಹಿಸುವ ಕಣಜನಾ? ಅಥವಾ ರಾಜ ಮಹಾರಾಜರ ಸುರಂಗ ಮಾರ್ಗನಾ? ಎಂದು ಪ್ರಶ್ನಿಸಿದರು. ಯಾಕೆ ಪದೇ ಪದೇ ಭೂಕುಸಿತವಾಗುತ್ತಿದೆ ಎಂಬುದರ ಬಗ್ಗೆ ತನಿಖೆ ಮಾಡಬೇಕು. ಭೂ ಕುಸಿತವಾದ ಪ್ರದೇಶಕ್ಕೆ ಕೂಡಲೆ ಮಣ್ಣು ಹಾಕುವಂತೆ ಸ್ಥಳೀಯರು ಒತ್ತಾಯ ಮಾಡಿದ್ದಾರೆ.
ಜಿಲ್ಲೆಯ ನರಗುಂದ ಪಟ್ಟಣದಲ್ಲಿ ಪದೇ ಪದೇ ಭೂ ಕುಸಿತವಾಗುತ್ತಿದ್ದು, ಅಲ್ಲಿನ ಜನರು ನಿತ್ಯ ಭಯದಲ್ಲಿ ಜೀವನ ನಡೆಸುತ್ತಿದ್ದಾರೆ. ಈ ಬೆನ್ನಲ್ಲೇ ಈಗ ಗದಗ ನಗರದಲ್ಲಿ ಭೂ ಕುಸಿತವಾಗಿರೋದು ಜನರನ್ನು ಇನಷ್ಟು ಭಯಪಡುವಂತೆ ಮಾಡಿದೆ. ಗಣಿ ಮತ್ತು ವಿಜ್ಞಾನ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಸೂಕ್ತವಾದ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.