ಕೊಪ್ಪಳ ತಾಲೂಕಿನ ಕಾರಟಗಿ ತಾಲೂಕಿನ ಉಳೇನೂರು ಗ್ರಾಮಕ್ಕೆ ಸಂಪರ್ಕ ಒದಗಿಸುವ ರಸ್ತೆ ಸರಿ ಇರಲಿಲ್ಲ. ಕಳಪೆ ರಸ್ತೆಯನ್ನು ಕಂಡು ಬೆಂಗಳೂರಿನಲ್ಲಿ ಇಂಜನೀಯರ್ ಆಗಿರುವ ಸುರೇಶ್ ಎಂಬವರು ವಿಡಿಯೋ ಮಾಡಿದ್ದರು. ಆಗಸ್ಟ್ ತಿಂಗಳಲ್ಲಿ ಈ ರಸ್ತೆ ಸರಿ ಪಡಿಸಿ ಎಂದು ರಸ್ತೆಯಲ್ಲಿ ಭತ್ತ ನಾಟಿ ಮಾಡುವ ಮೂಲಕ ಪ್ರತಿಭಟನೆ ಸಹ ನಡೆಸಿದ್ದರುಪೊಲೀಸರಿಂದ ಬೆದರಿಕೆ ಆರೋಪ!
ಇದರ ನಂತರ ಕಾರಟಗಿ ಪೊಲೀಸರು ಎರಡು ದಿನಗಳ ಹಿಂದೆ ಸುರೇಶ್ ಮನೆಗೆ ಹೋಗಿ ಪೊಲೀಸ್ ಠಾಣೆಗೆ ಬರಬೇಕು. ಇಲ್ಲದಿದ್ದರೆ ಪ್ರಕರಣ ದಾಖಲಿಸುವುದಾಗಿ ಹೇಳಿದ್ದರು. ಮನೆಗೆ ಪೊಲೀಸರು ಬಂದಿರೋದನ್ನು ಪ್ರಶ್ನಿಸಿ ಸುರೇಶ್ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ರು. ವಿಡಿಯೋ ವೈರಲ್ ಬಳಿಕ ಹಲವು ಫೋನ್ ಮಾಡಿದ್ದರಿಂದ ಪೊಲೀಸರು ಹಿಂದಿರುಗಿದ್ದರು.
ಸುರೇಶ್ ಮಡಿವಾಳದ ಬೆಂಗಳೂರಿನ ಮಾಹಿತಿ ತಂತ್ರಜ್ಞಾನ ಕಂಪನಿಯಲ್ಲಿ ಇಂಜನೀಯರ್ ಆಗಿದ್ದಾರೆ. ಕಳೆದೆರಡು ವರ್ಷದಿಂದ ವರ್ಕ್ ಫ್ರಂ ಹೋಂ ನಿಂದಾಗಿ ಊರಿನಲ್ಲಿದ್ದು, ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ನಿತ್ಯ ಓಡಾಡುವ ಸಿದ್ದಾಪುರದಿಂದ ಉಳೇನೂರು ರಸ್ತೆ ಸರಿ ಇಲ್ಲದಿರುವದಕ್ಕೆ ಆಕ್ರೋಶಗೊಂಡು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದರು.
ಈ ಪ್ರಕರಣದ ಬಗ್ಗೆ ಜನವರಿ 19 ರಂದು ಮಾಧ್ಯಮಯೊಂದರ ನೇರ ಪ್ರಸಾರದ ವೇಳೆ ವಿಡಿಯೋ ಮಾಡಿದ ಯುವಕನಿಗೆ ತಲೆ ಕೆಟ್ಟಿದೆ ಎಂದು ಕನಕಗಿರಿ ಶಾಸಕ ಬಸವರಾಜ ದಡೇಸಗೂರು ಹೇಳಿದ್ದರು.
ವಿ ಸ್ಟಾಂಡ್ ವಿಥ್ ಸುರೇಶ್ ಅಭಿಯಾನ
ಯುವಕನಿಗೆ ಪೊಲೀಸರ ಪ್ರಕರಣದ ಬಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಸಾರವಾದ ನಂತರ ಈಗ ಪೊಲೀಸರು ಸುಮ್ಮನೆ ಆಗಿದ್ದಾರೆ. ಈ ಘಟನೆಯು ಇಡೀ ರಾಜ್ಯದಲ್ಲಿ ಯುವಕರನ್ನು ಕೆರಳಿಸಿದ್ದು ವಿ ಸ್ಟಾಂಡ್ ವಿಥ್ ಸುರೇಶ್ ಎಂಬ ಅಭಿಯಾನ ಆರಂಭಿಸಿದ್ದಾರೆ.
ನೂರಾರು ಜನರು ಸುರೇಶ್ ಅವರಿಗೆ ಬೆಂಬಲವಾಗಿ ನಿಂತಿದ್ದಾರೆ. ಈ ಮಧ್ಯೆ ಸುರೇಶ್ ಹಾಗೂ ಆತನ ಸ್ನೇಹಿತರು ಕೊಪ್ಪಳ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಧಿಕಾರಿ, ಲೋಕಪಯೋಗ ಇಲಾಖೆ, ಸಂಸದರಿಗೆ ಮನವಿ ಸಲ್ಲಿಸಿದ್ದಾರೆ.
ನಮಗೆ ಶಾಸಕರು ಜರಿದರು ಪರವಾಗಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಬೆಂಬಲ ಸಿಕ್ಕಿದ್ದರು, ನಮಗೆ ಇದಕ್ಕಿಂತ ಮೊದಲು ನಮ್ಮೂರ ರಸ್ತೆ ಸರಿಯಾಗಲಿ ಎಂದು ಮನವಿ ಮಾಡಿಕೊಂಡಿದ್ದಾರೆ. ಈಗಲಾದರೂ ಈ ರಸ್ತೆ ಸರಿಪಡಿಸಲಾಗುತ್ತದೆಯೋ ಕಾದು ನೋಡಬೇಕು.