ಯಾದಗಿರಿ: ನಗರಸಭೆ ಸದಸ್ಯೆಗೆ ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ ಎಂದು ಬೆಂಬಲಿಗರು ಮತ್ತು ಆಯೋಜಕರ ನಡುವೆ ಮಾರಾಮಾರಿ ನಡೆದ ಘಟನೆ ನಗರದ ಲಾಡಿಸ್ ಗಲ್ಲಿಯ ಭವಾನಿ ಮಂದಿರದ ಬಳಿ ನಡೆದಿದೆ.
ವಿಜಯದಶಮಿ ನಿಮಿತ್ತ ಆಯುಧ ಪೂಜೆ ಹಿನ್ನೆಲೆಯಲ್ಲಿ ಲಾಡಿಸ್ ಗಲ್ಲಿಯ ಭವಾನಿ ಮಂದಿರದ ಬಳಿ ಹಿಂದೂ ಸೇವಾ ಸಮಿತಿಯಿಂದ ಕಾರ್ಯಕ್ರಮವನ್ನ ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮಕ್ಕೆ ನಗರಸಭೆ ಸದಸ್ಯೆ ಜಯಮ್ಮ ಅವರಿಗೆ ಆಹ್ವಾನ ನೀಡಿಲ್ಲ ಎಂಬ ವಿಚಾರವಾಗಿ ನಗರಸಭೆ ಸದಸ್ಯೆ ಬೆಂಬಲಿಗರು ಮತ್ತು ಕಾರ್ಯಕ್ರಮ ಆಯೋಜಕರ ನಡುವೆ ಮಾತಿನ ಚಕಮಕಿ ನಡೆದಿದೆ.
ಕೆಲಹೊತ್ತಿನ ಬಳಿಕ ಗಲಾಟೆ ಶುರುವಾಗಿದ್ದು, ಪರಸ್ಪರರು ಗಲಾಟೆ ಶುರು ಹಚ್ಚಿಕೊಂಡಿದ್ದಾರೆ. ಈ ವೇಳೆ ಕುರ್ಚಿ, ಟೇಬಲ್, ಕಲ್ಲು, ಬಡಿಗೆ ಹಿಡಿದು ಬಡಿದಾಡಿಕೊಂಡಿದ್ದಾರೆ. ಗಲಾಟೆಯಲ್ಲಿ ನಗರಸಭೆ ಸದಸ್ಯೆ ಪತಿ ಸೇರಿದಂತೆ ಒಂಬತ್ತು ಮಂದಿಗೆ ಗಾಯಗಳಾಗಿದ್ದು ಮೂವರಿಗೆ ತೀವ್ರ ಗಾಯಗಳಾಗಿವೆ. ಗಾಯಾಳುಗಳನ್ನು ಯಾದಗಿರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಕುರಿತು ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಹಿಂದೂ ಸೇವಾ ಸಮಿತಿಯ 19 ಮಂದಿ ಮೇಲೆ ಕೇಸ್ ದಾಖಲಾಗಿದೆ.