ಮೈಸೂರು: ಇಲವಾಲದ ಸುತ್ತಮುತ್ತಲಿನ 52 ಹಳ್ಳಿಗಳಿಗೆ ಕುಡಿಯುವ ನೀರಿನ ಯೋಜನೆ ಅನುಷ್ಠಾನ ಮಾಡಿದ್ದೆ. ಹಳ್ಳಿಗಳಿಗೆ ಕುಡಿಯುವ ನೀರಿನ ಯೋಜನೆಗೆ ಹಣ ಕೊಟ್ಟರೂ ಅದನ್ನು ಇನ್ನೂ ಕೂಡ ಈ ಸರ್ಕಾರ ಅನುಷ್ಠಾನ ಮಾಡಿಲ್ಲ. ತೆರಿಗೆ ಹಣವನ್ನು ಸ್ವೇಚ್ಛಾಚಾರವಾಗಿ ಸರ್ಕಾರ ಲೂಟಿ ಮಾಡುತ್ತಿದೆ ವಿನಃ ಜನರಿಗೆ ನೆರವಾಗುತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
ಮೈಸೂರಿನ ಬೆಳವಾಡಿಯ ಚಾಮುಂಡೇಶ್ವರಿ ನಗರದ ಚಾಮುಂಡೇಶ್ವರಿ ದೇವಸ್ಥಾನವನ್ನು ಉದ್ಘಾಟಿಸಿ, ಮಾತಾನಾಡಿದ ಅವರು, ಕೊರೊನಾದಿಂದ ಮೃತಪಟ್ಟ ಪತಿ ಕಳೆದುಕೊಂಡು ಆರ್ಥಿಕ ಸಂಕಷ್ಟಕ್ಕೆ ಒಳಗಾದ ತಾಯಿಯೊಬ್ಬಳು ಇಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಳು. ಇಂತಹ ಹಲವು ಕುಟುಂಬ ಸಂಕಷ್ಟಕ್ಕೆ ಸಿಲುಕಿವೆ. ಆದರೆ ಸರ್ಕಾರಕ್ಕೆ ಇದು ಕಾಣಿಸುತ್ತಿಲ್ಲ ಎಂದು ಅಸಮಾಧಾನವನ್ನು ಹೊರ ಹಾಕಿದರು.
ಮೈಸೂರಿನ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಜನರು ಪ್ರೀತಿಯಿಂದ ನೋಡಿದ್ದಾರೆ. ಈ ಕ್ಷೇತ್ರದ ಜನರ ಋಣ ಇದೆ.ನಾನು ಯಾರಿಗೂ ಅನ್ಯಾಯ ಮಾಡಿಲ್ಲ. ನಮ್ಮ ಪಕ್ಷದಿಂದ ಬೆಳೆದವರು ಈ ಪಕ್ಷ ಮುಗಿತು ಅಂತಾರೆ, ಆದರೆ ನಿಮ್ಮಂತಹ ಜನರ ಪ್ರೀತಿ ವಿಶ್ವಾಸ ಇರುವ ಕಾರಣ ಜೆಡಿಎಸ್ ಪಕ್ಷ ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ 2023 ಚುನಾವಣೆಯಲ್ಲಿ ಸ್ವತಂತ್ರ ಸರ್ಕಾರ ನಡೆಸಲು ಜನರು ಬೆಂಬಲಿಸಿ ಎಂದು ಕೇಳಿಕೊಂಡರು.