ಬೆಂಗಳೂರು: ಮಕ್ಕಳಿಲ್ಲ ಅನ್ನೋ ವೀಕ್ನೆಸ್ಸೇ ಇವರ ಬಂಡವಾಳ. ಸಂತಾನ ಭಾಗ್ಯ ಇಲ್ಲ ಎಂದು ಬಾಡಿಗೆ ಮಕ್ಕಳನ್ನ ಪಡೆಯೋ ನಿರ್ಧಾರಕ್ಕೆ ಬರೋ ಮುನ್ನ ಈ ಸ್ಟೋರಿಯನ್ನೊಮ್ಮೆ ಓದಿ ಬಿಡಿ. ಯಾಕಂದ್ರೆ ಮಕ್ಕಳಾಗದೇ ಬೇಸತ್ತಿರುವ ಮುಗ್ಧ ಜನರೇ ಇವರ ಟಾರ್ಗೆಟ್.
ಜಿಲ್ಲೆಯಲ್ಲಿ ಬಾಡಿಗೆ ತಾಯಿ ಮೂಲಕ ಮಕ್ಕಳು ಕೊಡ್ತೀವಿ ಅಂತ ಹೇಳಿ ಲಕ್ಷಾಂತರ ರೂಪಾಯಿ ಹಣ ವಸೂಲಿ ಮಾಡಿ ವಂಚಿಸಿದ್ದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಡಿಸಿಪಿ ಹರೀಶ್ ಪಾಂಡೆ ನೇತೃತ್ವದ ತಂಡ ಯಶಸ್ವಿಯಾಗಿದೆ.
ಏನಿದು ಪ್ರಕರಣ?
ಜಿಲ್ಲೆಯಲ್ಲಿ ತಾಯಿಯೋರ್ವಳು ತಾನೇ ಮಗು ಹೆತ್ತು ಬಾಡಿಗೆ ತಾಯಿಯ ಮೂಲಕ ಹೆತ್ತ ಮಗು ಎಂದು ಹೇಳಿ ಹೆತ್ತ ಮಕ್ಕಳನ್ನೇ ಮಾರಾಟ ಮಾಡ್ತಿದ್ದಳು ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಇದುವರೆಗೆ ನಾಲ್ಕು ಮಕ್ಕಳನ್ನ ಹೆತ್ತು ಮಾರಾಟ ಮಾಡಿದ್ದಾಳೆ. ಈ ಕೇಸ್ಗೆ ಸಂಬಂಧಿಸಿ ದೇವಿಷಣ್ಮುಗಮ್ಮ, ಮಹೇಶ್, ರಾಜಣ್ಣ, ಜನಾರ್ಧನ್, ಧನಲಕ್ಷ್ಮೀ ಎಂಬುವವರನ್ನು ಪೊಲೀಸರು ಬಂಧಿಸಿದ್ದರು.
ಸದ್ಯ ಆರೋಪಿತೆ ತನ್ನ ಮಕ್ಕಳನ್ನೇ ಹಣದಾಸೆಗೆ ಮಾರಾಟ ಮಾಡಲು ಯತ್ನಿಸಿರುವುದು ಬೆಳಕಿಗೆ ಬಂದಿದೆ. ಡಿಸಿಪಿ ಹರೀಶ್ ಪಾಂಡೆ ನೇತೃತ್ವದಲ್ಲಿ ಇದಕ್ಕೆಂದೇ ರಚನೆಯಾಗಿದ್ದ ವಿಶೇಷ ತಂಡ ಮಗು ಮಾರಾಟ ಮಾಡುವಾಗ ದಾಳಿ ಮಾಡಿ ಆರೋಪಿಯನ್ನು ಬಂಧಿಸಿದ್ದಾರೆ. ಆ ಮೂಲಕ ಮಕ್ಕಳನ್ನ ಪಡೆದ ಪೋಷಕರಿಗೆ ಶಾಕ್ ನೀಡಿದ್ದಾರೆ.
ಹೌದು ಆರೋಪಿ ಮಹಿಳೆ ಬಳಿ ಮಕ್ಕಳನ್ನು ಪಡೆದಿದ್ದ ಪೋಷಕರಿಗೆ ಗರ ಬಡಿದಂತಾಗಿದ್ದು ಸುಮಾರು ಎರಡು ವರ್ಷದಿಂದ ಇವಳ ಬಳಿ ಪಡೆದ ಮಕ್ಕಳನ್ನು ತಮ್ಮ ಮಕ್ಕಳೆಂದು ಸಲುಹಿದ್ದಾರೆ. ಆದರೆ ಖತರ್ನಾಕ್ ಮಹಿಳೆಯ ಅಸಲಿ ಬಂಡವಾಳ ಬಯಲಾಗುತ್ತಿದ್ದಂತೆ ಆ ಮಕ್ಕಳನ್ನ ಇದೀಗ ಮೂಲ ಪೋಷಕರಿಗೆ ಕೊಡೋದಾ ಬೇಡ್ವಾ ಅನ್ನುವುದ್ರ ಬಗ್ಗೆ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದ್ದು ಪೋಷಕರೂ ಚಿಂತೆಗೀಡಾಗಿದ್ದಾರೆ.