ಹುಬ್ಬಳ್ಳಿ: ದೇಶ ರಕ್ಷಣೆಗೆ ಬದ್ಧವಾಗಿರುವ ಸಂಘ ಇಲ್ಲದೇ ಹೋಗಿದ್ದರೆ ಭಾರತದಲ್ಲಿ ಈ ವೇಳೆಗಾಗಲೇ ನಾಲ್ಕೈದು ಪಾಕಿಸ್ತಾನಗಳು ನಿರ್ಮಾಣವಾಗುತ್ತಿದ್ದವು ಎಂದು ಶಾಸಕ ಜಗದೀಶ ಶೆಟ್ಟರ್ ಹೇಳಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಅಲ್ಪಸಂಖ್ಯಾತರನ್ನು ಓಲೈಸುವ ಸಲುವಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಆರ್ ಎಸ್ಎಸ್ ಅನ್ನು ಜಿದ್ದಿಗೆ ಬಿದ್ದಂತೆ ಟೀಕಿಸುತ್ತಿವೆ. ಆದರೆ ದೊಡ್ಡ ಇತಿಹಾಸ ಹೊಂದಿರುವ ಆರ್ ಎಸ್ಎಸ್ನಿಂದಾಗಿ ದೇಶ ಸುರಕ್ಷಿತವಾಗಿ ಹಾಗೂ ಶಾಂತಿರೀತಿಯಿಂದ ಉಳಿದುಕೊಂಡಿದೆ. ದೇಶದ ಒಗ್ಗಟ್ಟು ಹಾಗೂ ಏಕತೆಯನ್ನು ನಿರ್ಮಿಸುವ ಕೆಲಸವನ್ನು ಈ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮಾಡುತ್ತಿದೆ’ ಎಂದಿದ್ದಾರೆ.
ಕಾಂಗ್ರೆಸ್ ಹಾಗೂ ಹೆಡಿಎಸ್ ಪಕ್ಷಗಳಿಗೆ ಸಂಘವನ್ನು ಟೀಕೆ ಮಾಡುವುದು ಫ್ಯಾಷನ್ ಆಗಿದೆ. ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಒಬ್ಬರಾದ್ಮೇಲೆ ಇನ್ನೊಬ್ಬರು ಪದೇ ಪದೇ ಸಂಘವನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಇದು ಕೇವಲ ರಾಜಕಾರಣದ ಸಲುವಾಗಿ ಡೀಕೆ ಮಾಡುತ್ತಿದ್ದಾರೆ’ ಎಂದು ಹೇಳಿದ್ದಾರೆ.
ಕುಮಾರಸ್ವಾಮಿ ಅವರು, ‘ಹಿಂದಿನ ಸಂಘವೇ ಬೇರೆ, ಈಗಿನ ಸಂಘವೇ ಬೇರೆ’ ಎಂದು ಹೇಳಿಕೆ ನೀಡಿದ್ದರು ಇದಕ್ಕೆ ಪ್ರತಿಕ್ರಿಯಿಸಿದ ಶೆಟ್ಟರ್, ‘ರಾಜಕಾರಣದಲ್ಲಿ ಹಿಂದಿನ ಜನತಾ ಪರಿವಾರ ಬೇರೆ ಈಗಿನ ಜೆಡಿಎಸ್ ಬೇರೆ ಎಂದರೆ ನಂಬಬಹುದು. ಹಿಂದಿನ ಕಾಂಗ್ರೆಸ್ ಹಾಗೂ ಇಂದಿನ ಕಾಂಗ್ರೆಸ್ ಬೇರೆ ಬೇರೆ ಎಂದರೂ ಒಪ್ಪಬಹುದು. ಆದರೆ ಆರ್ ಎಸ್ಎಸ್ ಹಾಗಲ್ಲ. ಅಲ್ಲಿ ವ್ಯಕ್ತಿಗಳು ಬದಲಾಗುತ್ತಾರೆ, ವಿಚಾರಧಾರೆಗಳು ಹಾಗೂ ತತ್ವ ಎಂದಿಗೂ ಬದಲಾಗುವುದಿಲ್ಲ. ‘ದೇಶ ಮೊದಲು’ ಎನ್ನುವ ಧ್ಯೇಯವನ್ನು ಸಂಘ ಈಗಲೂ ಉಳಿಸಿಕೊಂಡು ಬಂದಿದೆ’ ಎಂದು ತಿರುಗೇಟು ನೀಡಿದ್ದಾರೆ.