ಕಲಬುರಗಿ: ಹಲ್ಲಿಗೆ ಕ್ಲಿಪ್ ಹಾಕಿಸಿಕೊಳ್ಳಲು ಆಸ್ಪತ್ರೆಗೆ ಸೇರಿದ ಯುವಕನೋರ್ವ ಸಾವನ್ನಪ್ಪಿದ ಘಟನೆ ನಗರದಲ್ಲಿ ನಡೆದ ಬಗ್ಗೆ ವರದಿಯಾಗಿದೆ.
ಶಶಾಂಕ(19) ಮೃತ ಯುವಕ. ಈತ ಹಲ್ಲಿಗೆ ಕ್ಲಿಪ್ ಹಾಕಿಸಿಕೊಳ್ಳಲು ಕಲಬುರಗಿ ನಗರದ ಚಿರಾಯು ಆಸ್ಪತ್ರೆಗೆ ಹೋದಾಗ ಆತನಿಗೆ ವೈದ್ಯರು ಆಪರೇಷನ್ ಮೊದಲು ಅರವಳಿಕೆ ಚುಚ್ಚುಮದ್ದು ನೀಡಿದ್ದರು. ಪರಿಣಾಮ ಯುವಕ ಪ್ರಜ್ಞಾಹೀನನಾಗಿದ್ದು, ಆತ ಕಳೆದ ಮೂರು ದಿನಗಳಿಂದ ಕೋಮಾಕ್ಕೆ ಜಾರಿದ್ದನು. ಆದರೆ ನಿನ್ನೆ ತಡರಾತ್ರಿ ಮೃತಪಟ್ಟನೆಂದು ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ.
ವೈದ್ಯರು ನೀಡಿದ ಅರವಳಿಕೆಯಿಂದ ತಮ್ಮ ಮಗ ಸಾವನ್ನಪ್ಪಿದ್ದಾನೆಂದು ಆರೋಪಿಸಿ ಕುಟುಂಬದವರು ಆಸ್ಪತ್ರೆಯ ವಿರುದ್ಧ ಆರೋಪ ಮಾಡಿದ್ದಾರೆ. ಆಸ್ಪತ್ರೆಯ ಎದುರು ಪ್ರತಿಭಟನೆ ನಡೆಸಿದಾಗ ಅವರ ನೆರವಿಗೆ ನೂರಾರು ಜನ ಬಂದ ಹಿನ್ನೆಲೆಯಲ್ಲಿ ಸ್ವಲ್ಪ ಹೊತ್ತು ಆಸ್ಪತ್ರೆಯ ಎದುರಿಗೆ ಬೀಗುವಿನ ವಾತಾವರಣ ಕಂಡು ಬಂದಿತ್ತು. ಅಂತಿಮವಾಗಿ ಪೋಲಿಸರು ಮಧ್ಯ ಪ್ರವೇಶಿಸಿ ಮೃತ ಯುವಕನ ಶರೀರವನ್ನು ಶವ ಪರೀಕ್ಷೆಗಾಗಿ ಆಸ್ಪತ್ರೆಗೆ ಸೇರಿಸಿದರು.
ಈ ಬಗ್ಗೆ ಸ್ಟೇಷನ್ ಬಜಾರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಮೃತ ಯುವಕನ ಶವ ಪರೀಕ್ಷೆ ಹಾಗೂ ಆತನ ರಕ್ತದ ಮಾದರಿಯನ್ನು ಪರೀಕ್ಷಿಸಿ ವರದಿಯನ್ನು ಎಂಸಿಐಗೆ ನಂತರ ವೈದ್ಯರ ನಿರ್ಲಕ್ಷ ಕಂಡುಬಂದರೆ ಅಂತಹವರ ವಿರುದ್ಧ ಕ್ರಮದ ಸಾಧ್ಯತೆಯಿದೆ.