ಬೆಂಗಳೂರು: ಎಫ್ಎಸ್ಎಲ್ ಪರೀಕ್ಷೆಯಲ್ಲಿ ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ ಸೇರಿದಂತೆ ಹಲವರು ಡ್ರಗ್ಸ್ ಸೇವಿಸಿರುವುದು ದೃಢಪಟ್ಟ ಬೆನ್ನಲ್ಲೇ, ನಿರ್ದೇಶಕ ಇಂದ್ರಜಿತ್ ಲಂಕೇಶ್ ಸುದ್ದಿಗೋಷ್ಠಿ ನಡೆಸಿ, ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.
ಇವತ್ತಿನ ಎಫ್ಎಸ್ಎಲ್ ವರದಿ ನೋಡಿ ಸಮಾಧಾನವಾಗಿದೆ. ನನಗೆ ಯಾರ ಮೇಲೂ ವೈಯಕ್ತಿಕ ದ್ವೇಷವಿಲ್ಲ. ಈ ಪ್ರಕರಣದಲ್ಲಿ ಇನ್ನೂ ದೊಡ್ಡದೊಡ್ಡ ತಿಮಿಂಗಿಲಗಳಿವೆ. ಅವರನ್ನು ಹಿಡಿಯುವುದು ಇನ್ನೂ ಬಾಕಿ ಇದೆ. ಈ ಬಗ್ಗೆ ಕೋರ್ಟ್ನಲ್ಲಿ ತನಿಖೆ ನಡೆಯುತ್ತಿದೆ. ಹಾಗಾಗಿ, ನಾನು ಅದನ್ನು ಬಹಿರಂಗ ಪಡಿಸುವಂತಿಲ್ಲ. ಈ ಪ್ರಕರಣದ ತನಿಖೆಗೆ ಸಿಸಿಬಿಗೆ ನಾನು ಎಲ್ಲಾ ರೀತಿಯಲ್ಲೂ ಸಹಕರಿಸುತ್ತೇನೆ. ಮತ್ತೆ ಸಿಸಿಬಿ ಅಧಿಕಾರಿಗಳು ಕರೆದರೆ ಸಹಕರಿಸಲು ಸಿದ್ದನಿದ್ದೇನೆ. 12 ಕೋಟಿಯಷ್ಟು ಡ್ರಗ್ಸ್ ಅನ್ನು ಹೊಟ್ಟೆಯಲ್ಲಿ ಇಟ್ಟುಕೊಂಡು ಸಪ್ಲೈ ಮಾಡುತ್ತಾರೆ. ಇದರಿಂದ ಯುವಕರು, ವಿದ್ಯಾರ್ಥಿಗಳು ಹಾಳಾಗ್ತಾರೆ ಎಂದರು.
ಡ್ರಗ್ಸ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಗೃಹ ಸಚಿವರಿಗೆ ದೂರು ನೀಡಿದ್ದನ್ನು ಪ್ರಸ್ತಾಪಿಸಿದ ಅವರು, ನನಗಿದ್ದ ಮಾಹಿತಿ ಆಧರಿಸಿ ಗೃಹ ಸಚಿವರಿಗೆ ದೂರು ನೀಡಿದ್ದೆ. ಆಗ ಸ್ಯಾಂಡಲ್ವುಡ್ನ ಕೆಲವರು ನನ್ನನ್ನು ಟೀಕಿಸಿದ್ದರು. ಇಂದ್ರಜಿತ್ಗೆ ಕೆಲಸ ಇಲ್ಲ ಎಂದು ಹೇಳಿದ್ದರು. ಕೋಟ್ಯಂತರ ರೂ. ಮೌಲ್ಯದ ಡ್ರಗ್ಸ್ ಬೆಂಗಳೂರಿಗೆ ಬರುತ್ತಿದ್ದು, ಇದರಿಂದ ಬೆಂಗಳೂರಿನಲ್ಲಿ ಡ್ರಗ್ಸ್ಗಿರುವ ಬೇಡಿಕೆ ತಿಳಿಯುತ್ತದೆ. ಹೀಗಾಗಿ, ಡ್ರಗ್ಸ್ ಬಗ್ಗೆ ಇನ್ನೂ ಹೆಚ್ಚಿನ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ.