ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ ಪಶುವೈದ್ಯಾಧಿಕಾರಿ ನೇಮಕ ಅಕ್ರಮ ಪ್ರಕರಣಕ್ಕೆ ತನಿಖೆ ತೀವ್ರಗೊಂಡಿದ್ದು, ಸಿಐಡಿ ಅಧಿಕಾರಿಗಳ ಮುಂದೆ ಅಭ್ಯರ್ಥಿಯೊಬ್ಬ ತನ್ನ ಕೃತ್ಯವನ್ನು ಸಂಪೂರ್ಣವಾಗಿ ಒಪ್ಪಿಕೊಂಡಿದ್ದಾನೆ.
30 ವರ್ಷದ ಅಭ್ಯರ್ಥಿ ಮಹಮದ್ ಸುಹೇಲ್ ಎಂಬಾತ ಸಿಐಡಿ ವಿಚಾರಣೆ ವೇಳೆ ಮಹತ್ವದ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದು, ನೇಮಕಾತಿ ಹಗರಣದ ಕರಾಳ ಮುಖ ಬಯಲಾಗಿದೆ.
ಕೆಪಿಎಸ್ಸಿ ಪರೀಕ್ಷೆಯಲ್ಲಿ ಹುದ್ದೆ ಪಡೆಯಲು ಬರೋಬ್ಬರಿ 40 ಲಕ್ಷ ರೂ.ಗೆ ಡೀಲ್ ಕುದುರಿಸಲಾಗಿತ್ತು.ಡೀಲ್ ಪ್ರಕಾರ ಅಭ್ಯರ್ಥಿ ಸುಹೇಲ್ ಮುಂಗಡ ಹಣವಾಗಿ 20 ಲಕ್ಷ ರೂಪಾಯಿಗಳನ್ನು ನೇಮಕಾತಿ ಜಾಲದ ಕಿಂಗ್ಪಿನ್ಗಳಿಗೆ ಪಾವತಿಸಿದ್ದ.
ಯಾರ ಕೈಗೂ ಸಿಗಬಾರದು ಎಂಬ ಉದ್ದೇಶದಿಂದ ಸಂಪೂರ್ಣ ಸಂಭಾಷಣೆ ಮತ್ತು ಡೀಲ್ ಪ್ರಕ್ರಿಯೆಯನ್ನು ಕೇವಲ ವಾಟ್ಸಾಪ್ ಕರೆಯ ಮೂಲಕವೇ ನಡೆಸಲಾಗಿತ್ತು.
ಪರೀಕ್ಷೆಗೆ ಮುನ್ನ ಅಭ್ಯರ್ಥಿಗಳಿಗೆ ರೆಸಾರ್ಟ್ ಒಂದರಲ್ಲಿ ವಾಸ್ತವ್ಯ ಕಲ್ಪಿಸಿ, ಅಲ್ಲಿಯೇ ಪರೀಕ್ಷೆಗೆ ಸಂಬಂಧಿಸಿದ ರಹಸ್ಯ ತರಬೇತಿ ನೀಡಲಾಗಿತ್ತು ಎಂದು ಆತ ವಿವರಿಸಿದ್ದಾನೆ.
ಸಿಐಡಿ ಅಧಿಕಾರಿಗಳು ಮಹಮದ್ ಸುಹೇಲ್ ನೀಡಿದ ತಪ್ಪೊಪ್ಪಿಗೆ ಹೇಳಿಕೆಯನ್ನು ಅಧಿಕೃತವಾಗಿ ದಾಖಲಿಸಿಕೊಂಡಿದ್ದು, ಈ ನೇಮಕಾತಿ ದಂಧೆಯ ಹಿಂದಿರುವ ಕಿಂಗ್ಪಿನ್ಗಳು ಹಾಗೂ ಇತರೆ ಮಧ್ಯವರ್ತಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
Laxmi News 24×7