ಕೊಪ್ಪಳ: ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ವೆಂಕಟಾಪುರ ಮತ್ತು ತುಮರಿಕೊಪ್ಪ ಗ್ರಾಮಗಳ ತಾಂಡ ಬಳಿ ಕಳ್ಳಭಟ್ಟಿ ಸಾರಾಯಿ ತಯಾರಿಸುತ್ತಿದ್ದನ್ನು ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳು ದಾಳಿ ನಡೆಸಿ, ಅಲ್ಲಿದ್ದ ಪರಿಕರಗಳನ್ನು ವಶಕ್ಕೆ ತೆಗೆದುಕೊಂಡಿದ್ದು, ಆರೋಪಿಗಳು ಪರಾರಿಯಾಗಿದ್ದಾರೆ.
ಗುಡ್ಡಗಾಡು ಪ್ರದೇಶದಲ್ಲಿ ಕಳ್ಳಭಟ್ಟಿ ತಯಾರಿಕಾ ಘಟಕದ ಮೇಲೆ ತಹಶೀಲ್ದಾರ್ ಎಂ.ಸಿದ್ದೇಶ್ ನೇತೃತ್ವದಲ್ಲಿ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದರು. ಅಬಕಾರಿ ಇಲಾಖೆ, ಕಂದಾಯ, ಮತ್ತು ಪೊಲೀಸ್ ಇಲಾಖೆ ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿ ಕಳ್ಳಭಟ್ಟಿ ತಯಾರಿಕೆ ಪರಿಕರಗಳನ್ನು ವಶಕ್ಕೆ ಪಡೆದರು. ಆರೋಪಿಗಳು ಪರಾರಿಯಾಗಿದ್ದಾರೆ.
ಭಟ್ಟಿ ಸಾರಾಯಿ ತಯಾರಿಕೆಗೆ ಬಳಸಲು ಸಂಗ್ರಹಿಸಿದ್ದ ಸುಮಾರು 800 ಲೀಟರ್ ಬೆಲ್ಲದ ಕೊಳೆ ಹಾಗೂ 20 ಲೀಟರ್ ಕಳ್ಳಭಟ್ಟಿ ಸಾರಾಯಿಯನ್ನು ಸ್ಥಳದಲ್ಲೇ ನಾಶಪಡಿಸಲಾಯಿತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ
ಹನುಮಸಾಗರ ಠಾಣೆ ಸಬ್ ಇನ್ಸ್ಪೆಕ್ಟರ್ ಅಮರೇಶ ಹುಬ್ಬಳ್ಳಿ , ಅಬಕಾರಿ ಇನ್ಸ್ಪೆಕ್ಟರ್ ಹೊನ್ನೂರ ವಲಿ, ಸಬ್ ಇನ್ಸ್ಪೆಕ್ಟರ್ ಉಷಾ ಇಂಡಿಗೇರಿ, ಇತರರು ಇದ್ದರು.