ಕೊಡಗು: ಕೊರೊನಾ ಮಹಾಮಾರಿ ಸೋಂಕು ತಡೆಯುವ ಉದ್ದೇಶದಿಂದ ಗ್ರಾಮದ ಯುವಕರೇ ಸ್ವಯಂ ಪ್ರೇರಿತರಾಗಿ ರಸ್ತೆಗಳಿಗೆ ಸ್ಯಾನಿಟೈಸರ್ ಮಾಡುತ್ತಿರುವ ಘಟನೆ ವಿರಾಜಪೇಟೆ ತಾಲೂಕಿನ ಚಯ್ಯನಕೋಟೆ ಗ್ರಾಮದಲ್ಲಿ ನಡೆದಿದೆ.
ಕೊರೊನಾ ವೈರಸ್ ಹರಡುವ ಮುನ್ನ ಎಚ್ಚರಿಕೆ ವಹಿಸಿದ ಯುವಕರು, ಒಂದು ವಾಟ್ಸಾಪ್ ಗ್ರೂಪ್ ಮಾಡಿಕೊಂಡು ಸ್ವಯಂ ಪ್ರೇರಿತರಾಗಿ ಗ್ರಾಮದ ಪ್ರತೀ ರಸ್ತೆಗಳಿಗೆ ಸ್ಯಾನಿಟೈಸರ್ ಸಿಂಪಡಿಸುತ್ತಿದ್ದಾರೆ. ಸ್ವಂತ ಖರ್ಚಿನಲ್ಲಿ ಸ್ಯಾನಿಟೈಸರ್ ಮಾಡಿರುವ ಯುವಕರ ಸಾಮಾಜಿಕ ಕಾಳಜಿಯ ಕೆಲಸಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅಲ್ಲದೆ ಗ್ರಾಮಕ್ಕೆ ಯಾರೇ ಬರುವುದಾದರೂ ಸ್ಯಾನಿಟೈಸರ್ ಬಳಸಿ ಬರುವಂತೆ ಅರಿವು ಮೂಡಿಸುತ್ತಿದ್ದಾರೆ. ತರಕಾರಿ ವ್ಯಾಪಾರಕ್ಕೆ ಹೊರಗಿನಿಂದ ಬರುವ ವ್ಯಾಪಾರಿಗಳಿಗೂ ಮಾಸ್ಕ್ ಧರಿಸಿದ್ದರೆ ಮಾತ್ರ ಊರಿಗೆ ಪ್ರವೇಶ ಕಲ್ಪಿಸಲಾಗುತ್ತಿದೆ. ಜೊತೆಗೆ ಗ್ರಾಮದ ಹೆಬ್ಬಾಗಿಲಲ್ಲೇ ಸ್ಯಾನಿಟೈಸರ್ ಬಳಸಿ ಬಳಿಕ ಬರುವಂತೆ ಸೂಚನೆ ನೀಡಲಾಗಿದೆ. ಗ್ರಾಮದ ಪ್ರವೇಶಿಸುವ ಮೊದಲು ಏನೆಲ್ಲ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು ಬರಬೇಕು ಎಂಬ ಸೂಚನಾ ಫಲಕದಲ್ಲಿ ತಿಳಿಸಿದ್ದಾರೆ.