ಹೊಸದಿಲ್ಲಿ: ರಾಜಸ್ಥಾನದ ರಾಜಕೀಯದ ಅನಿಶ್ಚಿತತೆ ಮುಂದುವರಿದಿದೆ. ಬಿಜೆಪಿ ನಾಯಕರ ದೂರವಾಣಿ ಸಂಭಾಷಣೆಗಳನ್ನು ರಾಜ್ಯ ಸರ್ಕಾರ ಕದ್ದಾಲಿಕೆ ಮಾಡಿದೆ ಎಂಬ ಆರೋಪ ತೀವ್ರವಾಗುತ್ತಿದ್ದು, ಈ ಬಗ್ಗೆ ರಾಜಸ್ಥಾನ ಸರ್ಕಾರದ ಬಳಿ ಕೇಂದ್ರ ಗೃಹ ಸಚಿವಾಲಯ ವರದಿ ಕೇಳಿದೆ.
ರಾಜಸ್ಥಾನದ ಗೆಹ್ಲೋಟ್ ಸರಕಾರವನ್ನು ಉರುಳಿಸಲು ಬಿಜೆಪಿ ಆಮಿಷವೊಡ್ಡಿದೆ ಎಂಬ ಮಾತುಗಳಿಗೆ ಆಧಾರ ಒದಗಿಸುವಂತಹ ಸಂಭಾಷಣೆಗಳುಳ್ಳ ಆಡಿಯೋ ಕ್ಲಿಪ್ ನ್ನು ಕಾಂಗ್ರೆಸ್ ಬಹಿರಂಗಪಡಿಸಿದ್ದು, ಎರಡು ಎಫ್ ಐಆರ್ ಕೂಡಾ ದಾಖಲಾಗಿದೆ. ಈ ಕುರಿತು ಕೂಡಾ ಕೇಂದ್ರ ಗೃಹ ಸಚಿವಾಲಯ ವರದಿ ಕೇಳಿದೆ.
ರಾಜಸ್ಥಾನದ ಕಾಂಗ್ರೆಸ್ ಸರಕಾರ ಬಿಜೆಪಿ ನಾಯಕರ ಫೋನ್ ಕದ್ದಾಲಿಕೆ ಮಾಡುತ್ತಿದೆ ಎಂದು ಬಿಜೆಪಿ ಆರೋಪಿಸಿದೆ. ಈ ಬಗ್ಗೆ ಸಿಬಿಐ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದೆ. ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಈ ಆಡಿಯೋ ಗಳು ನೈಜವಾಗಿರುವುದು ಎಂದು ಪ್ರತಿಪಾದಿಸುತ್ತಿದ್ದಾರೆ. ಈ ಬಗ್ಗೆ ನಿನ್ನೆ ಪತ್ರಿಕಾಗೋಷ್ಠಿ ನಡೆಸಿದ್ದ ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ, ಆಡಿಯೋ ಕ್ಲಿಪ್ ಗಳ ನೈಜತೆ, ಸತ್ಯಾಸತ್ಯತೆಗಳ ಸಂಶಯ ವ್ಯಕ್ತಪಡಿಸಿದ್ದಾರೆ.
ಈ ಮಧ್ಯೆ ದೂರವಾಣಿ ಕದ್ದಾಲಿಕೆ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ರಾಜಸ್ಥಾನ ಸರ್ಕಾರವನ್ನು ವಜಾ ಮಾಡಿ, ರಾಷ್ಟ್ರಪತಿ ಆಡಳಿತ ಹೇರಬೇಕೆಂದು ಮಾಯಾವತಿ ಆಗ್ರಹಿಸುತ್ತಿದ್ದಾರೆ.