Home / ಜಿಲ್ಲೆ / ಬೆಳಗಾವಿ / ಗೋಕಾಕ / ಗೋಕಾಕದಲ್ಲಿಂದು ಗೋಕಾಕ-ಮೂಡಲಗಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಬಾಲಚಂದ್ರ ಜಾರಕಿಹೊಳಿ
????????????????????????????????????

ಗೋಕಾಕದಲ್ಲಿಂದು ಗೋಕಾಕ-ಮೂಡಲಗಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಬಾಲಚಂದ್ರ ಜಾರಕಿಹೊಳಿ

Spread the love

ಗೋಕಾಕ: ಸಾರ್ವಜನಿಕರಿಗೆ ಸಮರ್ಪಕವಾಗಿ ಪಡಿತರ ಧಾನ್ಯಗಳನ್ನು ವಿತರಿಸುತ್ತಿಲ್ಲ ಎಂಬ ವ್ಯಾಪಕ ದೂರುಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಕೂಡಲೇ ಅಗತ್ಯ ಕ್ರಮ ಕೈಗೊಂಡು ನ್ಯಾಯಬೆಲೆ ಅಂಗಡಿಯವರಿಗೆ ಕಟ್ಟುನಿಟ್ಟಿನ ಕ್ರಮ ಜರುಗಿಸುವಂತೆ ಅರಭಾವಿ ಶಾಸಕ ಹಾಗೂ ಕೆಎಮ್‍ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಂಗಳವಾರ ಸಂಜೆ ಇಲ್ಲಿನ ತಹಶೀಲ್ದಾರ ಕಚೇರಿಯಲ್ಲಿ ಗೋಕಾಕ ಮತ್ತು ಮೂಡಲಗಿ ತಾಲೂಕುಗಳ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲು ಸೂಚಿಸಿದರು.
ನ್ಯಾಯಬೆಲೆ ಅಂಗಡಿಗಳಲ್ಲಿ ಪ್ರತಿ ತಿಂಗಳ 10 ರಿಂದ 25ನೇ ತಾರೀಖಿನೊಳಗಾಗಿ ಆಹಾರ ಧಾನ್ಯಗಳನ್ನು ವಿತರಿಸಬೇಕು. ಸರ್ಕಾರದಿಂದ ಬರುತ್ತಿರುವ ಪಡಿತರ ಧಾನ್ಯಗಳು ಬಡಕುಟುಂಬಗಳಿಗೆ ವಿತರಿಸುವ ಕಾರ್ಯವನ್ನು ಅಧಿಕಾರಿಗಳು ಕೈಗೊಳ್ಳಬೇಕು. ಜೊತೆಗೆ ಸಾರ್ವಜನಿಕರೊಂದಿಗೆ ಅಂಗಡಿ ಮಾಲೀಕರು ಸೌಜನ್ಯಯುತವಾಗಿ ವರ್ತಿಸುವಂತೆ ಅವರು ತಿಳಿಸಿದರು.
ಅರಭಾವಿ ಮತಕ್ಷೇತ್ರದಲ್ಲಿ ರಸ್ತೆÀ ಕಾಮಗಾರಿಗಳನ್ನು ಅಭಿವೃದ್ದಿ ಪಡಿಸಲು ಅನುದಾನ ಬರುತ್ತಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಯಾವೊಬ್ಬ ಅಧಿಕಾರಿಗಳು ಕಾಮಗಾರಿ ಸ್ಥಳಕ್ಕೆ ಭೇಟಿ ನೀಡುತ್ತಿಲ್ಲ, ಕುಲಗೋಡದಿಂದ ಯಾದವಾಡದ ವರೆಗೆ ರಸ್ತೆಯನ್ನು ಅಭಿವೃದ್ದಿ ಪಡಿಸಲು ಕಾಮಗಾರಿ ಚಾಲನೆಯಲ್ಲಿದ್ದರೂ ತ್ವರಿತಗತಿಯಲ್ಲಿ ಸಾಗುತ್ತಿಲ್ಲ, ಅಲ್ಲದೇ ಪ್ರತಿವರ್ಷ ರಸ್ತೆಗಳ ನಿರ್ವಹಣೆಗಾಗಿ ಸರ್ಕಾರದಿಂದ ಅನುದಾನ ಬರುತ್ತಿದ್ದರೂ ಸಹ ಅದನ್ನು ಸಮರ್ಪಕವಾಗಿ ಬಳಕೆ ಮಾಡುತ್ತಿಲ್ಲ, ನಿರ್ವಹಣೆಗೆ ಬರುತ್ತಿರುವ ಅನುದಾನ ಎಲ್ಲಿ ಖರ್ಚು ಮಾಡಲಾಗಿದೆ ಎಂಬುದನ್ನು ತಕ್ಷಣವೇ ತಮಗೆ ವರದಿ ನೀಡಬೇಕು. ಕರ್ತವ್ಯದಲ್ಲಿ ಲೋಪವೆಸಗುವ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ ಕ್ರಮ ಕೈಗೊಳ್ಳುವುದು. ಟೆಂಡರ್ ಆಗಿದ್ದರೂ ಇದುವರೆಗೂ ಕಾಮಗಾರಿಗಳನ್ನು ಆರಂಭಿಸಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.
ಅರಭಾವಿ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಗಾಯರಾಣ ಜಾಗೆಯಲ್ಲಿರುವ ಸಾರ್ವಜನಿಕರಿಗೆ ವಾಸಿಸಲು ಆಕ್ರಮ-ಸಕ್ರಮ ಯೋಜನೆಯಡಿ ಸುಮಾರು 1500 ಅರ್ಜಿಗಳನ್ನು ಸಲ್ಲಿಸಿದ್ದು ಅಂತವರಿಗೆ ಹಕ್ಕುಪತ್ರ ನೀಡಿ ಬಡಕುಟುಂಬಗಳಿಗೆ ಅನುಕೂಲ ಮಾಡಿಕೊಡುವಂತೆ ಸೂಚಿಸಿದರು.
ಕೋವಿಡ್‍ನಿಂದಾಗಿ ಗ್ರಾಮೀಣ ಸಾರಿಗೆಯ ಕೆಲವೊಂದು ಬಸ್ ಸಂಚಾರವನ್ನು ಮಾತ್ರ ಪ್ರಾರಂಭಿಸಲಾಗಿದೆ. ಇದರಿಂದ ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಕೂಡಲೇ ಸಾರ್ವಜನಿಕರ ಹಿತದೃಷ್ಠಿಯಿಂದ ಈ ಹಿಂದೆ ಇರುವ ಎಲ್ಲ ಬಸ್‍ಗಳನ್ನು ಹಿಂದಿನ ವೇಳಾಪಟ್ಟಿಯಂತೆ ವಸ್ತಿಬಸ್‍ಗಳನ್ನು ಸಂಚರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ಪ್ರವಾಹದಿಂದ ಹಾನಿಗೊಳಗಾದ ಮನೆಗಳ ಜಿಪಿಎಸ್ ಕಾರ್ಯ ಬಾಕಿ ಉಳಿದಿದ್ದು, ಕೂಡಲೇ ಅಂತಹ ಫಲಾನುಭವಿಗಳಿಗೆ ಅನುಕೂಲ ಮಾಡಿಕೊಡಬೇಕು. ಅಗತ್ಯ ಬಿದ್ದರೇ ಜಿಲ್ಲಾಧಿಕಾರಿಗಳ ಜೊತೆ ಈ ವಿಷಯವಾಗಿ ನಾನೇ ಖುದ್ದಾಗಿ ಮಾತನಾಡುತ್ತೇನೆಂದು ಹೇಳಿದರು.
ಅಂಗನವಾಡಿ ಸಹಾಯಕ ಹುದ್ದೆಯಿಂದ ಕಾರ್ಯಕರ್ತೆ ಹುದ್ದೆಗೆ ಬಡ್ತಿಗಾಗಿ ಸ್ಥಿರಿಕರಿಸುವ ಪಟ್ಟಿಯಲ್ಲಿರುವ 12 ಜನರಿಗೆ ಕೂಡಲೇ ಪದೋನ್ನತಿ ನೀಡಬೇಕು. ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗಾಗಿ ಅರ್ಜಿಗಳನ್ನು ಪಡೆದುಕೊಂಡಿದ್ದು, ಅಂತಿಮ ಪಟ್ಟಿಯನ್ನು ಸಿದ್ದಗೊಳಿಸುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಹೊಸ ಗ್ರಾಮ ಪಂಚಾಯತಿ ಸಮಿತಿಗಳು ಅಸ್ತಿತ್ವಕ್ಕೆ ಬಂದ ಹಿನ್ನೆಲೆಯಲ್ಲಿ ಎಸ್‍ಡಿಎಮ್‍ಸಿ ಸಮಿತಿಗಳನ್ನು ರದ್ದು ಪಡಿಸಿ ಅವರಿಗಿರುವ ಅಧಿಕಾರವನ್ನು ಶಾಲೆಯ ಮುಖ್ಯೋಪಾಧ್ಯಾಯರಿಗೆ ನೀಡುವಂತೆ ಸೂಚನೆ ನೀಡಿದರು. ಮೂಡಲಗಿ ಪಟ್ಟಣದ ರಸ್ತೆಗಳನ್ನು ಪುರಸಭೆಯವರು ಅಭಿವೃದ್ದಿ ಪಡಿಸಬೇಕು. ಈಗಾಗಲೇ ಗುರ್ಲಾಪೂರ ಕ್ರಾಸ್‍ದಿಂದ ಮೂಡಲಗಿ ಪಟ್ಟಣದ ವರೆಗೆ ರಸ್ತೆ ಕಾಮಗಾರಿಗೆ ನೀರಾವರಿ ಇಲಾಖೆಯಿಂದ ಅನುದಾನ ಬಿಡುಗಡೆಯಾಗಿದೆ. ಕಲ್ಮೇಶ್ವರ ವೃತ್ತದಿಂದ ಕಾಲೇಜುವರಿಗಿನ ರಸ್ತೆಯನ್ನು ಸುಧಾರಣೆ ಮಾಡುವಂತೆ ಅಲ್ಲಿನ ಪುರಸಭೆಗೆ ಸೂಚನೆ ನೀಡಿದರು.
ನೋಟಿಸ್ ಕೊಡಿ: ಶಾಸಕರ ಪ್ರದೇಶಾಭಿವೃದ್ದಿ ಕಾಮಗಾರಿಗಳು ಮಂದಗತಿಯಲ್ಲಿ ಸಾಗುತ್ತಿದ್ದು ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬರುತ್ತಿವೆ. ಬಾಕಿ ಉಳಿದಿರುವ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಪ್ರತಿ ಸಭೆಗೆ ಗೈರಾಗುತ್ತಿರುವ ಭೂಸೇನಾ ನಿಗಮದ ಅಧಿಕಾರಿಗಳಿಗೆ ತಕ್ಷಣವೇ ಕಾರಣ ಕೇಳಿ ನೋಟಿಸ್ ಜಾರಿ ಮಾಡಬೇಕೆಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಖಡಕ್ಕಾಗಿಯೇ ಸೂಚಿಸಿದರು.
ಗೋಕಾಕ ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ, ಮೂಡಲಗಿ ತಹಶೀಲ್ದಾರ ದಿಲಶಾದ ಮಹಾತ, ತಾ.ಪಂ ಇಓ ಬಸವರಾಜ ಹೆಗ್ಗನಾಯಕ, ಡಿವಾಯ್‍ಎಸ್‍ಪಿ ಜಾವೀದ್ ಇನಾಮದಾರ, ಜಿ.ಪಂ ಎಇಇ ಉದಯಕುಮಾರ ಕಾಂಬಳೆ, ಆಯ್.ಎಮ್.ದಫೇದಾರ, ಸಹಾಯಕ ಕೃಷಿ ನಿರ್ದೆಶಕ ಎಮ್.ಎಮ್.ನದಾಫ, ಸಿಡಿಪಿಓ ವಾಯ್.ಎಮ್.ಗುಜನಟ್ಟಿ, ಮೂಡಲಗಿ ಸಿಪಿಐ ವೆಂಕಟೇಶ ಮುರನಾಳ, ಬಿಇಓ ಅಜೀತ ಮನ್ನಿಕೇರಿ, ಹಿರಿಯ ತೋಟಗಾರಿಕೆ ಸಹಾಯಕ ನಿರ್ದೇಶಕ ಎಮ್.ಎಲ್.ಜನ್ಮಟ್ಟಿ, ಗೋಕಾಕ ನಗರಸಭೆ ಪೌರಾಯುಕ್ತ ಶಿವಾನಂದ ಹಿರೇಮಠ, ಮೂಡಲಗಿ ಪುರಸಭೆ ಮುಖ್ಯಾಧಿಕಾರಿ ದೀಪಕ ಹರ್ದಿ, ಹಿಂದುಳಿದ ವರ್ಗಗಳ ತಾಲೂಕಾಧಿಕಾರಿ ಆರ್.ಕೆ.ಬಿಸಿರೊಟ್ಟಿ, ವಲಯ ಅರಣ್ಯಾಧಿಕಾರಿ ಕೆ.ಎನ್.ವಣ್ಣೂರ ಸಮಾಜ ಕಲ್ಯಾಣ ಅಧಿಕಾರಿ ಎಸ್.ವಿ.ಕಲ್ಲಪ್ಪನವರ ಸೇರಿದಂತೆ ಗೋಕಾಕ ಹಾಗೂ ಮೂಡಲಗಿ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.


Spread the love

About Laxminews 24x7

Check Also

ಬುಧವಾರದಂದು ಪ್ರಧಾನಿಗಳು ಆಗಮಿಸುವ ಸ್ಥಳವನ್ನು ಪರಿಶೀಲಿಸಿದ : ಬಾಲಚಂದ್ರ & ರಮೇಶ್ ಜಾರಕಿಹೊಳಿ

Spread the loveಬೆಳಗಾವಿ- ಪ್ರಧಾನಿ ನರೇಂದ್ರ ಮೋದಿಯವರು ಬೆಳಗಾವಿ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರ ಪ್ರಚಾರಾರ್ಥವಾಗಿ ಬೆಳಗಾವಿಗೆ ಬರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ