ಗೋಕಾಕ : ರಾಜ್ಯ ಸರ್ಕಾರದ ವಿದ್ಯುತ್ ದರ ಏರಿಕೆ ನಿರ್ಧಾರವನ್ನು ಹಿಂಪಡೆಯಬೇಕೆಂದು ಒತ್ತಾಯಿಸಿ ಗೋಕಾಕ ಬ್ಲಾಕ್ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಶುಕ್ರವಾರ ಇಲ್ಲಿನ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ರಾಜ್ಯ ಸರ್ಕಾರ ಏಕಾಏಕಿ ವಿದ್ಯುತ್ ದರ ಏರಿಸಿರುವುದು ಅತ್ಯಂತ ಅವೈಜ್ಞಾನಿಕವಾಗಿದೆ. ಇಂತಹ ಆರ್ಥಿಕ ಸಂಕಷ್ಟದ ಪರಿಸ್ಥಿತಿಯಲ್ಲಿ ಬಿಜೆಪಿ ಸರ್ಕಾರ ಕೈಗೊಂಡಿರುವ ನಿರ್ಧಾರ ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಈ ತೀರ್ಮಾನ ಖಂಡನೀಯ ಎಂದು ಸಿಎಂ ಬಿಎಸ್ ವೈ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತ ಪಡಿಸಿದರು.
ರಾಜ್ಯದ ಜನತೆಗೆ ಕೋವಿಡ್ ಸಂದರ್ಭದಲ್ಲಿ ಜೀವನ ಸಾಗಿಸಲು ಪರದಾಡುತ್ತಿವೆ. ಇಂತಹ ಸಂದರ್ಭದಲ್ಲಿ ವಿದ್ಯುತ್ ದರ ಪ್ರತಿ ಯುನಿಟ್ ಗೆ 45 ಪೈಸೆ ಹೆಚ್ಚಳ ಮಾಡಿದ್ದು ಖಂಡನೀಯ. ಕೂಡಲೇ ಸರ್ಕಾರ ಈ ನಿರ್ಧಾರದಿಂದ ಹಿಂದೆ ಪಡೆಯಬೇಕು. ಒಂದು ವೇಳೆ ಸರ್ಕಾರ ಹಿಂಪಡೆಯದಿದ್ದರೆ ರಾಜ್ಯಾದಾದ್ಯಂತ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು.
ತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮವನಿ ರವಾನಿಸಿದರು. ಕಾಂಗ್ರೆಸ್ ಮುಖಂಡರು ವಿವೇಕ ಜತ್ತಿ, ಗೋಕಾಕ್ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪ್ರಕಾಶ್ ಪ್ರಭು ಡಾಂಗೆ, ಎಸ್ ಟಿ ಘಟಕದ ಅಧ್ಯಕ್ಷ ಪರಸಪ್ಪಾ ತಿಮ್ಮಯ್ಯನವರ, ಮಹಿಳಾ ಕಾಂಗ್ರೆಸ್ ಗ್ರಾಮೀಣ ಘಟಕದ ಅಧ್ಯಕ್ಷ ಮಂಜುಳಾ ರಾಮಗಾನಟ್ಟಿ, ನೇಹಾಲ ಹೂಲಿಕಟ್ಟಿ, ಉದಯ ತಳವಾರ, ಈರಣ್ಣಾ ಜನಮಟ್ಟಿ, ರಮೇಶ ಕೆಂಪನ್ನವರ ಸೇರಿದಂತೆ ಇತರರು ಇದ್ದರು.