ಪಣಜಿ: ಗೋವಾ ಚುವಾವಣೆಯಲ್ಲಿ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಯ ಸಾಧಿಸಲಿದ್ದು, ಕಾಂಗ್ರೆಸ್ ಅಧಿಕಾರ ಹಿಡಿಯುವುದು ಖಚಿತ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಚುನಾವಣೆ ವೀಕ್ಷಕ ಸತೀಶ್ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದರು.
ಗೋವಾ ರಾಜ್ಯದ ಮಡಗಾವನಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಗೋವಾದಲ್ಲಿ 40 ವಿಧಾನಸಭಾ ಕ್ಷೇತ್ರಗಳಿದ್ದು, 37 ಕ್ಷೇತ್ರಗಳಲ್ಲಿ ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿದೆ ಎಂದು ತಿಳಿಸಿದರು.
ಗೋವಾ ಮತ್ತು ಬೆಳಗಾವಿಗೆ ಉತ್ತಮ ನಂಟು ಹೊಂದಿದ್ದು, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರ ನೇತೃತ್ವದ ತಂಡ ಒಂದು ವಾರ ಮುಂಚಿತವಾಗಿಯೇ ಗೋವಾದಲ್ಲಿ ಬಿಡು ಬಿಟ್ಟಿದ್ದು, ಚುನಾವಣಾ ರಣತಂತ್ರ ಹೆಣೆಯುತ್ತಿದೆ.
ಚುನಾವಣಾ ಕಾರ್ಯತಂತ್ರ, ಕ್ಷೇತ್ರಗಳ ಅಧ್ಯಯನಕ್ಕೆ ತಂಡವನ್ನು ಗೋವಾಗೆ ಕಳುಹಿಸಿದ ಸತೀಶ್ ಜಾರಕಿಹೊಳಿ ಅವರು ಇಂದು ಗೋವಾದ ಮಡಗಾವನಲ್ಲಿ ಪ್ರಥಮ ಸಭೆ ನಡೆಸಿ, ತಂಡದಿಂದ ಎಲ್ಲಾ ಕೇತ್ರಗಳ ಮಾಹಿತಿ ಕಲೆ ಹಾಕಿದ್ದಾರೆ.
ಈಗಾಗಲೇ ಗೋವಾ ಚುನಾವಣಾ ಉಸ್ತುವಾರಿ ದಿನೇಶ್ ಗೂಂಡುರಾವ್ ಅವರು ಅನೇಕ ಸಭೆಗಳನ್ನು ನಡೆಸಿ, ಕಾಂಗ್ರೆಸ್ ಹೈ ಕಮಾಂಡ್ ಗೆ ಮಾಹಿತಿ ರವಾನಿಸಿದ್ದಾರೆ. ಅವರಿಗೆ ಸ್ಥಳೀಯ ಕಾಂಗ್ರೆಸ್ ಮುಖಂಡರು ಸೇರಿದಂತೆ ಸತೀಶ್ ಜಾರಕಿಹೊಳಿ ನೇತೃತ್ವದ ತಂಡ ಬೆನ್ನೆಲುಬು ಆಗಿ ನಿಂತಿದೆ.
ಒಟ್ಟಾರೇ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯಲು ಗೋವಾ ವಿಧಾನಸಭೆ ಚುನಾವಣೆ ಗಂಭೀರವಾಗಿ ಪರಿಗಣಿಸಿರುವ ಕಾಂಗ್ರೆಸ್ ಹೈ ಕಮೆಂಡ್ ಕರ್ನಾಟಕದ 16 ಜನರನ್ನು ಒಳಗೊಂಡಂತೆ 26 ಮುಖಂಡರನ್ನು ವೀಕ್ಷಕರನ್ನಾಗಿ ನಿಯೋಜನೆ ಮಾಡಿದೆ.
ನಾಮಪತ್ರ ಸಲ್ಲಿಕೆಗೆ ಜನವರಿ 28 ಕೊನೆ ದಿನವಾಗಿದ್ದು, ಫೆಬ್ರವರಿ 14ರಂದು ಚುನಾವಣೆ ನಡೆಯಲಿದ್ದು, ಮಾರ್ಚ್ 10ರಂದು ಫಲಿತಾಂಶ ಪ್ರಕಟವಾಗಲಿದೆ.
ಈ ಸಂದರ್ಭದಲ್ಲಿ ಗೋವಾ ಚುನಾವಣಾ ಉಸ್ತುವಾರಿ ದಿನೇಶ್ ಗೂಂಡುರಾವ್, ಪ್ರಕಾಶ ರಾಠೋಡ, ಪಿ.ವಿ. ಮೋಹನ, ಸುನೀಲ ಹನಮನ್ನವರ, ಪಂಚನಗೌಡ ದ್ಯಾಮನಗೌಡರ, ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷ ವಿನಯ ನಾವಲಗಟ್ಟಿ, ಮನಸೂರ ಖಾನ, ವಿವೇಕ ಯಾವಗಲ, ಪ್ರದೀಪ ನಾಯ್ಕ, ಪ್ರದೀಪ ಎಂ ಜೆ, ಸಿದ್ದು ಸುಣಗಾರ, ರಾಜದೀಪ ಕೌಜಲಗಿ ಸೇರಿದಂತೆ ಇತರರು ಇದ್ದರು.