ಹೊಸದಿಲ್ಲಿ: ಕೋವಿಡ್ 19 ಭೀತಿಯಿಂದಾಗಿ ಈ ವರ್ಷ ನಡೆಯಬೇಕಿದ್ದ ಜನಗಣತಿ ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್ಪಿಆರ್) ಪರಿಷ್ಕರಣೆಗಳನ್ನು ವರ್ಷದ ಮಟ್ಟಿಗೆ ಮುಂದೂಡಲಾಗಿದೆ.
ಕೋವಿಡ್ 19 ಕಾಲದಲ್ಲಿ ಜನಗಣತಿ ಸರಿಯಲ್ಲ. ಗಣತಿ ಒಂದು ವರ್ಷ ತಡವಾಗಿ ನಡೆದರೆ ತೊಂದರೆಯೇನೂ ಇಲ್ಲ ಎಂದು ಕೇಂದ್ರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
2021ರಲ್ಲಿ ಯಾವಾಗ ಜನಗಣತಿ ನಡೆಸಲಾಗುತ್ತದೆ ಎಂಬ ಬಗ್ಗೆ ಇನ್ನೂ ಸ್ಪಷ್ಟ ನಿರ್ಧಾರ ಕೈಗೊಳ್ಳಲಾಗಿಲ್ಲ. ಈ ವರ್ಷ ಗಣತಿ ನಡೆಸುವುದು ಬೇಡ ಎಂದಷ್ಟೇ ನಿರ್ಧರಿಸಲಾಗಿದೆ ಎಂದಿದ್ದಾರೆ.
ಸಿಬಂದಿಗೆ ಕೋವಿಡ್ 19 ತಗಲುವ ಸಾಧ್ಯತೆ
ಜನಗಣತಿ ಲಕ್ಷಾಂತರ ಸಿಬಂದಿ ದೇಶದ ಉದ್ದಗಲ ಎಲ್ಲ ಮನೆಗಳಿಗೆ ಹೋಗಿ ಮಾಹಿತಿ ಕಲೆ ಹಾಕಬೇಕು. ಆ ಸಿಬಂದಿಗೂ ಸೋಂಕು ತಗಲುವ ಸಾಧ್ಯತೆ ಇದೆ.
ಹಾಗಾಗಿ ಜನಗಣತಿಯನ್ನು ಮುಂದೂಡಲು ನಿರ್ಧರಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಮುಂದೂಡಿಕೆ ಇದೇ ಮೊದಲು
ದೇಶದಲ್ಲಿ ಪ್ರತೀ 10 ವರ್ಷಗಳಿಗೆ ಒಮ್ಮೆಯಂತೆ ಜನಗಣತಿಯು ಕಳೆದ 130 ವರ್ಷಗಳಿಂದ ನಡೆಯುತ್ತಿದೆ. ಅದು ಮುಂದೂಡಿಕೆಯಾಗುತ್ತಿರುವುದು ಇದೇ ಮೊದಲ ಬಾರಿ.