ಬೆಳಗಾವಿಯ ತುರಮುರಿ ಕಸದ ಡಿಪೋದಿಂದ ಹರಡುತ್ತಿರುವ ಮಾಲಿನ್ಯ ತಡೆಗೆ ವೈಜ್ಞಾನಿಕ ಕ್ರಮ ಕೈಗೊಳ್ಳಬೇಕು ಹಾಗೂ ನಗರದ ಕೈಗಾರಿಕಾ ಅಭಿವೃದ್ಧಿಗೆ ಸೆಮಿಕಂಡಕ್ಟರ್ ಉತ್ಪಾದನಾ ಘಟಕ ಸ್ಥಾಪಿಸಬೇಕು ಎಂದು ಸೋಶಿಯಲ್ ಜಸ್ಟಿಸ್ ಫೋರಂ ಜಿಲ್ಲಾಡಳಿತಕ್ಕೆ ಮಹತ್ವದ ಮನವಿ ಸಲ್ಲಿಸಿದೆ.
ಬೆಳಗಾವಿ ತಾಲೂಕಿನ ತುರಮುರಿ ಕಸದ ಡಿಪೋದಲ್ಲಿ ಅವೈಜ್ಞಾನಿಕವಾಗಿ ಕಸ ಸುರಿಯುತ್ತಿರುವುದರಿಂದ ಸುತ್ತಮುತ್ತಲಿನ ಪರಿಸರದಲ್ಲಿ ತೀವ್ರ ದುರ್ವಾಸನೆ ಹರಡುತ್ತಿದ್ದು, ಮಣ್ಣು ಮತ್ತು ನೀರು ಕಲುಷಿತಗೊಂಡು ನಾಗರಿಕರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಈ ನಿಟ್ಟಿನಲ್ಲಿ ‘ತ್ಯಾಜ್ಯದಿಂದ ಸಂಪತ್ತು’ (Waste to Wealth) ಪರಿಕಲ್ಪನೆಯಡಿ ಹಸಿ ಕಸದಿಂದ ಸಾವಯವ ಗೊಬ್ಬರ, ವಿದ್ಯುತ್ ಉತ್ಪಾದನೆ ಹಾಗೂ ಎರೆಹುಳು ಗೊಬ್ಬರ ತಯಾರಿಕಾ ಯೋಜನೆಗಳನ್ನು ಜಾರಿಗೆ ತರಬೇಕು ಎಂದು ಸೋಶಿಯಲ್ ಜಸ್ಟಿಸ್ ಫೋರಂ ಪ್ರಸ್ತಾವನೆ ಸಲ್ಲಿಸಿದೆ. ಇದರೊಂದಿಗೆ, ಬೆಳಗಾವಿಯ ಏರ್ಫೋರ್ಸ್ ಗುರುಪ್ರಸಾದ್ ಕಾಲೋನಿಯ 40 ಎಕರೆ ಜಾಗದಲ್ಲಿ ಸೆಮಿಕಂಡಕ್ಟರ್ ಉತ್ಪಾದನಾ ಘಟಕವನ್ನು ಸ್ಥಾಪಿಸುವಂತೆ ಫೋರಂ ಒತ್ತಾಯಿಸಿದೆ. ಈ ಯೋಜನೆಯಿಂದ ನಗರಕ್ಕೆ ಜಾಗತಿಕ ಮಟ್ಟದಲ್ಲಿ ತಾಂತ್ರಿಕ ಗುರುತು ಸಿಗುವುದಲ್ಲದೆ, ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಯಾಗಲಿದೆ.
ಈ ಸಂದರ್ಭದಲ್ಲಿ ಫೋರಂನ ಪ್ರಮುಖರಾದ ಸಂಗಮ ಕುಲಕರ್ಣಿ, ಶಿರೀಷ ತೆಂಡೂಲ್ಕರ್, ಅನಿಲ್ ದೇಶಪಾಂಡೆ, ನಕುಲ್ ಲೆಲೆ, ವಿಕಾಸ್ ಕಲಘಟಗಿ, ಸಂತೋಷ್ ಕಾಮತ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
Laxmi News 24×7